ನವದೆಹಲಿ :ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತಿದೆ ಇದರಿಂದ ಆತಂಕಗೊಂಡಿರುವ ಶಿಕ್ಷಕರು ಮತ್ತು ಪೋಷಕರು ,ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಈ ವರ್ಷ ಶಾಲೆಗಳನ್ನು ತೆರೆಯದೆ ಈ ವರ್ಷವನ್ನು ‘ಝೀರೋ ಅಕಾಡೆಮಿಕ್ ವರ್ಷ’ ಎಂದು ಘೋಷಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.ದೆಹಲಿ ಸರ್ಕಾರವೇ ಕೊರೋನಾ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದೆ. ಅದಲ್ಲದೆ ಉಪ ಮುಖ್ಯಮಂತ್ರಿ ಮನೀಷ್ ಸಿ ಸೋಡಿಯಾ ಅವರೇ ಜುಲೈ ಅಂತ್ಯದ ವೇಳೆಗೆ ದೆಹಲಿಯ 5.5 ಲಕ್ಷ ಜನ ಕೊರೋನಾ ಪೀಡಿತರಾಗಬಹುದು ಎಂದಿದ್ದಾರೆ.
ಶಾಲೆಗಳನ್ನು ಆರಂಭಿಸಿದ ಕಾರಣಕ್ಕೆ ಇಸ್ರೇಲ್ ನಲ್ಲಿ ಕೊರೋನಾ ಇನ್ನಷ್ಟು ಹರಡಿ ಇಡೀ ದೇಶವನ್ನೇ ಕಷ್ಟಕ್ಕೆ ಸಿಲುಕಿಸಿತ್ತು. ಇಸ್ರೇಲ್ ನಲ್ಲಿ ಶಾಲೆ ತೆರೆದುದರಿಂದ ಆದ ಅನಾಹುತ ಭಾರತದಲ್ಲಿ ಶಾಲೆಗಳನ್ನು ತೆರೆದರೆ ಆಗಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಆತಂಕ ವ್ಯಕ್ತಪಡಿಸಿವೆ.
ದೆಹಲಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೋನಾ ಬಂದಿದೆ. ಆ ಪೈಕಿ ನಾಲ್ವರು ಶಿಕ್ಷಕರು ಕೊರೋನಾದಿಂದ ಮೃತಪಟ್ಟಿದ್ದಾರೆ. ಕೊರೋನಾ ಮುಗಿಯುವವರೆಗೆ ಮಕ್ಕಳು ಮನೆಯಲ್ಲಿದ್ದರೆ ಕ್ಷೇಮ ಎನ್ನುವುದು ಹಲವು ಪೋಷಕರ ಸಂಘಗಳ ಅಭಿಪ್ರಾಯವಾಗಿದೆ.