
ಬೆಂಗಳೂರು, ಸೆ.25-ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿದೆ.
ಶ್ರೀ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ನಿರ್ದೇಶಕ ಎನ್.ನಂಜುಂಡಯ್ಯ, ಅವರ ಕುಟುಂಬದ ಸದಸ್ಯರು ಮತ್ತು ಇತರರಿಗೆ ಸೇರಿದ ಕೋಟ್ಯಂತರ ರೂ.ಗಳ ಆಸ್ತಿ-ಪಾಸ್ತಿಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ರಾಜ್ಯದ ವಿವಿಧೆಡೆ ಇರುವ ಕೃಷಿ, ಕೃಷಿಯೇತರ ಭೂಮಿ, ಜಮೀನುಗಳು, ರೆಸಾರ್ಟ್ಗಳು, ಬ್ಯಾಂಕ್ ಖಾತೆಗಳು ಹಾಗೂ ವಿವಿಧ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅನ್ವಯ ಈ ಕ್ರಮ ಜರುಗಿಸಲಾಗಿದೆ. ವಂಚನೆ, ಅಕ್ರಮ ಹಣಕಾಸು ವರ್ಗಾವಣೆ ಸೇರಿದಂತೆ ಕೆಲವು ಅಕ್ರಮ-ಅವ್ಯವಹಾರಗಳ ಸಂಬಂಧ ಈ ಸಂಸ್ಥೆಯ ನಿರ್ದೇಶಕರು ಮತ್ತಿತರರ ವಿರುದ್ದ ಇಡಿ ತನಿಖೆ ತೀವ್ರಗೊಳಿಸಿತ್ತು.













