ಆರಂಭದಲ್ಲೇ ರಾಜ್ಯಕ್ಕೆ ಸಿಗಲಿದೆ ಲಸಿಕೆ: ಡಾ. ಸುಧಾಕರ್

ಬೆಂಗಳೂರು: 2021 ರ ಆರಂಭದಲ್ಲೇ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪುಣೆಯ ಸೇರಂ ಸಂಸ್ಥೆ ಜೊತೆ ಆಸ್ಟ್ರಾಜನಿಕಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡು ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಮೈಸೂರಿನ ಜೆಎಸ್ಎಸ್ ಸಂಸ್ಥೆ ಜೊತೆಗೂ ಒಪ್ಪಂದವಾಗಿದೆ. 56 ದಿನಗಳ ಹಿಂದಷ್ಟೇ ಒಂದನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಇನ್ನು 2 ಹಾಗೂ 3 ನೇ ಹಂತದಲ್ಲಿ ದೇಶದ 1,600 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ. ಇನ್ನಷ್ಟು ಹೆಚ್ಚು ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಬೇಕು ಎಂದು ಸಂಸ್ಥೆಗೆ ಕೋರಲಾಗಿದೆ.
ಜೊತೆಗೆ ರಾಜ್ಯದಲ್ಲಿ ಲಸಿಕೆ ವಿತರಣೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ ಎಂದು ಸಚಿವರು ವಿವರಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗ ದೊಂದಿಗೆ ಆರೋಗ್ಯ ತಜ್ಞರು, ತಾಂತ್ರಿಕ ಪರಿಣತರು, ಪೂರೈಕೆದಾರರನ್ನು ಒಳಗೊಂಡಂತೆ ತಾಂತ್ರಿಕ ಸಮಿತಿ ರಚಿಸಿದ್ದು, ಲಸಿಕೆಯ ಪೂರೈಕೆ, ಸಂಗ್ರಹಣೆ, ವಿತರಣೆ ಕುರಿತು ಸಮಿತಿ ಸಲಹೆ ನೀಡಲಿದೆ.
ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ವಯೋ ವೃದ್ಧರು, ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿರುವ ವರಿಗೆ, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆಯ ದರದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ನಮ್ಮ ಸರ್ಕಾರ ಕೋವಿಡ್ ಪರೀಕ್ಷೆ, ಚಿಕಿತ್ಸೆ ಮೊದಲಾದ ವೆಚ್ಚಗಳನ್ನು ಭರಿಸಿದೆ. ಅದೇ ರೀತಿ ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಬದ್ಧ ಎಂದು ತಿಳಿಸಿದರು.
ಒಂದನೇ ಹಂತದ ಪ್ರಯೋಗದಲ್ಲಿ ಲಸಿಕೆ ನೀಡಿದಾಗ 28 ದಿನಗಳಲ್ಲಿ ಆ್ಯಂಟಿಬಾಡಿ ಉತ್ಪಾದನೆ ಆಗಿದೆ. 1 ನೇ ಹಂತದಲ್ಲಿ ಕೊರೊನಾ ಸೋಂಕು ಇಲ್ಲದ ವ್ಯಕ್ತಿ ಗಳಿಗೆ ಲಸಿಕೆ ನೀಡಲಾಗಿದೆ. 2, 3 ನೇ ಹಂತಗಳಲ್ಲಿ ಕೊರೊನಾ ಸೋಂಕು ಬಂದಿರುವವರಿಗೂ ಲಸಿಕೆ ನೀಡಲಾಗುತ್ತದೆ. ಪ್ರಯೋಗ ಯಶಸ್ವಿಯಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ಕೇಂದ್ರ ದೊಂದಿಗೆ ಮಾತುಕತೆ ನಡೆಸಿ, ರಾಜ್ಯದಲ್ಲಿ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.
ನಾನು ಆರೋಗ್ಯ ಖಾತೆ ವಹಿಸಿಕೊಂಡ ಬಳಿಕ ಕಳೆದ ಹತ್ತು ದಿನಗಳಿಂದ ಈಚೆಗೆ ಕೋರಾನಾ ಸೋಂಕು ಮತ್ತು ಕೋವಿಡ್ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಇದಕ್ಕೆ ಕೆಲವರು ಸಂಶಯದಿಂದಲೂ ನೋಡುತ್ತಿದ್ದಾರೆ. ಯಾವುದೇ ಅಂಕಿ- ಸಂಖ್ಯೆಯನ್ನು ನಾವು ವ್ಯತ್ಯಾಸ ಮಾಡುವ ಕೆಲಸ ಮಾಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಕರ್ನಾಟಕ ಸರ್ಕಾರ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಲಸಿಕೆ ಇನ್ನೂ ಪ್ರಯೋಗದ ಹಂತದಲ್ಲಿದೆ. ಆದ್ದರಿಂದ ಲಸಿಕೆಯ ದರದ ಬಗ್ಗೆ ಚರ್ಚಿಸಿಲ್ಲ. ಲಾಭಕ್ಕಾಗಿ ಲಸಿಕೆ ಮಾಡುತ್ತಿಲ್ಲ ಎಂದು ಆಸ್ಟ್ರಾಜನಿಕಾ ಕಂಪನಿಯವರು ಹೇಳಿದ್ದಾರೆ. ಕೋವಿಡ್ ಅಂಕಿ ಅಂಶದಲ್ಲಿ ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯವರು ಕೂಡ ನಮ್ಮ ಸರ್ಕಾರ ನೀಡುವ ಮಾಹಿತಿ ಪಾರದರ್ಶಕತೆಯಿಂದ ಕೂಡಿದೆ ಎಂದು ಶ್ಲಾಘಿಸಿದೆ. ನವೆಂಬರ್, ಡಿಸೆಂಬರ್, ಜನವರಿಯ ಚಳಿಗಾಲದ ಅವಧಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಸಚಿವರು ಹೇಳಿದರು.
ಸಾವು, ಸೋಂಕು ಮತ್ತು ಗುಣಮುಖರಾದವರ ಅಂಕಿ-ಅಂಶಗಳನ್ನು ಅತ್ಯಂತ ಪಾರದರ್ಶಕವಾಗಿ ನೀಡುತ್ತಿದ್ದೇವೆ. ಇಳಿಮುಖವಾಗಲು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಯೊಬ್ಬ ಕೊರೋನಾ ಯೋಧರ ಪ್ರಯತ್ನ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಟ್ರಾಜನಿಕಾ ವ್ಯವಸ್ಥಾಪಕ ನಿರ್ದೇಶಕ ಗಗನ್ ದೀಪ್ ಸಿಂಗ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ಸಭೆಯಲ್ಲಿದ್ದರು.