
ಅಗರ್ ಮಾಲ್ವಾದಲ್ಲಿನ ಕಾಮಧೇನು ಗೋವು ಅಭರಣ್ಯವು ಭಾರತದ ಮೊದಲ ಹಸು ಅಭಯಾರಣ್ಯವಾಗಿದ್ದು, ಇದನ್ನು ಚೌಹಾಣ್ ಸರ್ಕಾರ 2017 ರಲ್ಲಿ ಸ್ಥಾಪಿಸಿತ್ತು
ಹಸುಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಮಧ್ಯಪ್ರದೇಶ ಸರ್ಕಾರ “ಕೌ ಕ್ಯಾಬಿನೆಟ್” ರಚಿಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ. ಈ ಸಮಿತಿಯ ನಿಖರವಾದ ಕರ್ತವ್ಯಗಳ ಬಗ್ಗೆ ಇನ್ನೂ ಯಾವುದೇ ವಿವರಗಳನ್ನು ನೀಡಿಲ್ಲ.
ಪಶುಸಂಗೋಪನೆ, ರೈತರು ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಸಂಪುಟದ ಭಾಗವಾಗಲಿವೆ ಎಂದು ಚೌಹಾಣ್ ಹೇಳಿದ್ದಾರೆ.
“ರಾಜ್ಯದಲ್ಲಿ ಜಾನುವಾರುಗಳ ರಕ್ಷಣೆ ಮತ್ತು ಉತ್ತೇಜನಕ್ಕಾಗಿ” ಕ್ಯಾಬಿನೆಟ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಚೌಹಾಣ್ ಬರೆದಿದ್ದಾರೆ. “ಪಶುಸಂಗೋಪನೆ, ಅರಣ್ಯ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತರ ಕಲ್ಯಾಣ ಇಲಾಖೆಯು ಇದರ ಭಾಗವಾಗಲಿವೆ” ಎಂದಿದ್ದಾರೆ.
“ಈ ಸಂಪುಟದ ಮೊದಲ ಸಭೆ ನವೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಗೋಪಾಷ್ಟಮಿ ದಿನ ಅಗರ್ ಮಾಲ್ವಾದ ಗೋವು ಅಭಯಾರಣ್ಯದಲ್ಲಿ ನಡೆಸಲಾಗುತ್ತದೆ” ಎಂದಿದ್ದಾರೆ. ಅಗರ್ ಮಾಲ್ವಾ ದಲ್ಲಿನ ಕಾಮಧೇನು ಗೋವು ಅಭರಣ್ಯವು ಭಾರತದ ಮೊದಲ ಹಸು ಅಭಯಾರಣ್ಯವಾಗಿದ್ದು, ಇದನ್ನು ಚೌಹಾಣ್ ಸರ್ಕಾರ 2017 ರಲ್ಲಿ ಸ್ಥಾಪಿಸಿತು. ಇದನ್ನು ಮಧ್ಯಪ್ರದೇಶ ಗೋವು ಸಂವರ್ಧನ ಮಂಡಳಿಯು 32 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಪಡಿಸಿತ್ತು.
472 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಅಭಯಾರಣ್ಯವನ್ನು ನಂತರ ಆರ್ಥಿಕ ಬಿಕ್ಕಟ್ಟಿನಿಂದ ಖಾಸಗೀಕರಣಗೊಳಿಸಲಾಯಿತು ಎಂದು ಹಿಂದೂಸ್ತಾನ್ಟೈಮ್ಸ್ ವರದಿ ಮಾಡಿದೆ.
ಮಧ್ಯಪ್ರದೇಶದ ಬಿಜೆಪಿ ವಕ್ತಾರ ದೀಪಕ್ ವಿಜಯವರ್ಗಿಯಾ “ಗೋವು ಕ್ಯಾಬಿನೆಟ್ ರಚಿಸುವ ನಿರ್ಧಾರವು ಹಸುಗಳ ಸಾಮರ್ಥ್ಯ ಮತ್ತು ಅದರ ಮೂಲಕ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಗ್ರಾಮೀಣ ಉದ್ಯೋಗದ ಪರ್ಯಾಯ ಮೂಲವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ” ಎಂದು ಹೇಳಿದ್ದಾರೆ.
“ಉದ್ಯೋಗವನ್ನು ಒದಗಿಸುವ ಏಕೈಕ ಪರಿಹಾರ ಕೈಗಾರಿಕೀಕರಣ ಒಂದೇ ಅಲ್ಲ” ಎಂದು ವಿಜಯವರ್ಗಿಯಾ ಹೇಳಿದರು. “ಹಸುಗಳನ್ನು ಸುತ್ತುವರೆದಿರುವ ಆರ್ಥಿಕತೆಯು ಸುಸ್ಥಿರವಾಗಿದ್ದು, ಇದು 2,000 ವರ್ಷಗಳಿಂದಲೂ ನಡೆಯುತ್ತಿದೆ. ಈ ಕ್ಯಾಬಿನೆಟ್ ಮೂಲಕ, ಗ್ರಾಮೀಣ ವ್ಯವಸ್ಥೆಯಲ್ಲಿ ಆದಾಯವನ್ನು ಹೆಚ್ಚಿಸಲು ಗೋವು-ಆರ್ಥಿಕತೆ ಯನ್ನು ಅಭಿವೃದ್ಧಿಪಡಿಸಲು ಸರ್ಕಾರವು ಸುಸ್ಥಿರ ಮೂಲಸೌಕರ್ಯಗಳನ್ನು ಒದಗಿಸುತ್ತದೆ” ಎಂದಿದ್ದಾರೆ.
ಇನ್ನು ಈ ಕುರಿತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಪ್ರತಿಕ್ರಿಯೆ ನೀಡಿದ್ದು, “ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು 15 ತಿಂಗಳು ಗೊವುಗಳಿಗೆ ಆಶ್ರಯ ತಾಣ ನಿರ್ಮಿಸುವ ಬಗ್ಗೆ ಮಾತನಾಡಿದವು. ಆದರೆ ಅವರಿಂದ 15 ಗೋವು ಆಶ್ರಯ ತಾಣಗಳನ್ನು ನಿರ್ಮಿಸಲಾಗಲಿಲ್ಲ” ಎಂದು ಟೀಕಿಸಿದ್ದಾರೆ.













