ಹೊಳೆಯಲ್ಲಿ ಸಿಕ್ತು ಒಂದೇ ಕುಟುಂಬದ ಮೂವರ ಶವ:ಹೆಸರಿಡುವ ಮುಂಚೆ ಶವವಾಯ್ತು ಪುಟ್ಟಮಗು!

ಉತ್ತರ ಕನ್ನಡ:- ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಯಲ್ಲಾಪುರದ ಸಮೀಪದ ಗಣೇಶ್ ಪಾಲ್ ಹೊಳೆಯಲ್ಲಿ ಇಂದು ಪತ್ತೆಯಾಗಿವೆ.
ರಾಜೇಶ್ವರಿ ನಾರಾಯಣ ಹೆಗಡೆ (52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿ ಅವರ, ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಮೃತರಾದವರಾಗಿದ್ದಾರೆ.
ಈ ಮೂವರೂ ನ.20ರಂದು ಯಲ್ಲಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ನಂತರ ಕಾಣೆಯಾಗಿದ್ದರು. ಹಲವೆಡೆ ಹುಡುಕಾಡಿದ ಮನೆಯವರು ಭಾನುವಾರ, ದೂರು ನೀಡಲು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಆದ್ರೆ ಈ ವೇಳೆ ಗಣೇಶ್ ಪಾಲ್ ಹೊಳೆಯಲ್ಲಿ ಮೃತದೇಹಗಳು ಸಿಕ್ಕಿರುವ ಮಾಹಿತಿ ಲಭಿಸಿದ್ದು, ಕುಟುಂಬದವರೊಂದಿಗೆ ತೆರಳಿ ಮೃತದೇಹ ಪರೀಕ್ಷೆ ಮಾಡಿದಾಗ ಗುರುತು ಪತ್ತೆಯಾಗಿದೆ.
ವಾಣಿಯ ಪತಿಯ ಮನೆಯು ಶಿವಮೊಗ್ಗದಲ್ಲಿದ್ದು, ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಇಂದು ನಿಗದಿ ಮಾಡಲಾಗಿತ್ತು . ದುರಾದೃಷ್ಟ ವಶಾತ್ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ.
ಇನ್ನು ಘಟನೆ ಕುರಿತು ಆತ್ಮಹತ್ಯೆಯೋ ,ಕೊಲೆಯೋ ಎಂಬ ಕುರಿತು ಮಾಹಿತಿ ತಿಳಿದುಬರಬೇಕಿದ್ದು ಯಲ್ಲಾಪುರ ಪೊಲೀಸರು ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.