
ಬೆಂಗಳೂರು, ಜೂನ್ 12: ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ನಾಯಕರಿಯರು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಭವ್ಯಾ ಅವರಿಗೆ ತೇಜೋವಧೆ ಮಾಡುವ 50ಕ್ಕೂ ಹೆಚ್ಚು ಕರೆಗಳು ಬಂದಿವೆ, ಈ ಬಗ್ಗೆ ಪೊಲೀಸರಿಗೆ ದೂರು ಕೊಡಲಾಗಿದೆ, ಇದು ಒಬ್ಬ ಮಹಿಳೆ ಅಲ್ಲದೇಶದ ಮಹಿಳೆಯರ ಪ್ರಶ್ನೆ’ ಎಂದರು.
ಬಿಂದು ಗೌಡ ಅವರ ವಿರುದ್ಧವೂ ತೇಜೋವಧೆ ಮಾಡುತ್ತಿದ್ದಾರೆ, ನಮ್ಮ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನೂ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿದರು.
ನಕಲಿ ಖಾತೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ, ಇದರ ಹಿಂದಿರುವವರು ಯಾರು, ಅವರನ್ನು ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲವೇ?, ಇವರಿಗೆ ತೊಂದರೆ ಕೊಡುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
‘ಧೈರ್ಯವಿದ್ದರೆ ಚರ್ಚೆಗೆ ಬನ್ನಿ, ಅದನ್ನು ಬಿಟ್ಟು ತೇಜೋವಧೆ ಮಾಡಬೇಡಿ, ಇದರ ಹಿಂದೆ ಯುವ ರಾಜಕಾರಣಿಗಳು ಇರುವುದು ತಿಳಿದುಬಂದಿದೆ, ಶೋಭಾ, ಶಶಿಕಲಾ ಜೊಲ್ಲೆ ಇಲ್ವಾ ಯಾಕೆ ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ‘ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ, ಮಹಿಳೆಯರನ್ನು ಲಕ್ಷ್ಮೀ, ಸರಸ್ವತಿ ಎಂದು ಪೂಜೆ ಮಾಡುತ್ತೇವೆ, ನಮಗೆ ಪೂಜೆ ಬೇಡ ಮರ್ಯಾದಿ ಕೊಟ್ಟರು ಸಾಕು’ ಎಂದು ಹೇಳಿದರು.ಸಾಮಾಜಿಕ ಜಾಲತಾಣ ಸುರಕ್ಷಿತವಾಗಿಲ್ಲ, ಮಹಿಳೆಯರಿಗೆ ಇಷ್ಟೊಂದು ಬೆದರಿಕೆ ಕರೆ ಬರುತ್ತಿದೆ ಎಂದರೆ ಹೇಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಬಿಜೆಪಿಯಲ್ಲೂ ಮಹಿಳೆಯರಿದ್ದಾರೆ, ಅವರ ಬಗ್ಗೆಯೂ ಈ ರೀತಿ ಕರೆ ಬಂದರೆ ಹೇಗೆ, ಆ ರೀತಿ ಮಹಿಳೆಯರನ್ನು ಹೆದರಿಸುವುದು ಸರಿಯಲ್ಲ, ಸದಸನದಲ್ಲೂ ಇದನ್ನು ಗಮನಕ್ಕೆ ತರುತ್ತೇನೆ ಎಂದರು ಹೇಳಿದರು.