ಕರಾವಳಿ

ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ – ಡಿಸಿ ಜಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ  ಲಾಕ್ ಡೌನ್ ಸಮಯದಲ್ಲಿ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಇದಕ್ಕೆ ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್‌ಗಳ ಮತ್ತು ಸಾರ್ವಜನಿಕರ ಸತತ ಸಹಕಾರದಿಂದ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಗಣನೀಯ ಯಶಸ್ಸನ್ನು ಕಂಡಿದ್ದು, ಕೋವಿಡ್ ಪಾಸಿಟಿವಿಟಿ ಪ್ರಕರಣಗಳು ತೀವ್ರಗತಿಯಲ್ಲಿ ಇಳಿಮುಖ ಕಂಡಿದೆ. ಅದರ ಫಲಶೃತಿಯಾಗಿ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿದಿದ್ದರೂ ನಮ್ಮ ಜಿಲ್ಲೆಯಲ್ಲಿ ಹಲವಾರು ವಿನಾಯಿತಿಗಳನ್ನು ಘೋಷಿಸಲಾಗಿದೆ. ಕೈಗಾರಿಕೆಗಳನ್ನು ನಡೆಸಲು ಅನುಮತಿಸಲಾಗಿದೆ, ಅಗತ್ಯ ವಸ್ತುಗಳ ಅಂಗಡಿಗಳ ಸಮಯವನ್ನು ಅಪರಾಹ್ನ 2.00 ಗಂಟೆಯವರೆಗೆ ವಿಸ್ತರಿಸಲಾಗಿದೆ ಹಾಗೂ ಮದುವೆ ಕಾರ್ಯಕ್ರಮವನ್ನು ಮಾತ್ರ ಅವರವರ ಮನೆಯಲ್ಲಿ ಗರಿಷ್ಠ 40ಜನರ ಮಿತಿಗೊಳಪಟ್ಟು ನಡೆಸಲು ಅನಮತಿಸಿದೆ.

ಈ ನಡುವೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಗಮನಿಸಲಾಗಿದೆ. ಇವು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಅಲ್ಲದೇ, ಕೋವಿಡ್ ಪ್ರಕರಣಗಳ ಪ್ರಸರಣಕ್ಕೆ ಕಾರಣವಾಗಿ ಈ ವರೆಗೆ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು ಪ್ರಕರಣಗಳಲ್ಲಿ ಏರಿಕೆಯಾಗುವ ಸಂಭವವಿದೆ.

ಆದುದರಿಂದ, ಸಂಘ-ಸಂಸ್ಥೆಗಳು / ಸಾರ್ವಜನಿಕರು ಯಾವುದೇ ಸನ್ಮಾನದಂತಹ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕೋರಲಾಗಿದೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಲು ವಿನಂತಿಸಿದೆ. ಆಹಾರ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ಪರಿಕರಗಳನ್ನು ವಿತರಿಸುವ ಸಂಘ ಸಂಸ್ಥೆಗಳು ಯಾವುದೇ ಸಭೆ/ಸಮಾರಂಭಗಳನ್ನು ಆಯೋಜಿಸದೇ ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡುವುದರ ಮುಖಾಂತರ ಸಹಕರಿಸಲು ಕೋರಿದೆ.

ಇನ್ನು ಮುಂದೆ ಯಾವುದೇ ಸಂಘ-ಸಂಸ್ಥೆಗಳು/ಸಾರ್ವಜನಿಕರು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!