ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಡುಪಿ ಮೂಲದ ವ್ಯಕ್ತಿಯ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ !!!

ಮಣಿಪಾಲ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಡುಪಿ ಮೂಲದ ವ್ಯಕ್ತಿಯೊಬ್ಬರ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.
ಕಾಪು ತಾಲೂಕಿನ ಶಿರ್ವ ಗ್ರಾಮದ ಬಂಟಕಲ್ ನಿವಾಸಿ ತುಕಾರಾಂ ಭಟ್ ಅವರು ಪತ್ನಿ ಮತ್ತು ಮಗಳೊಂದಿಗೆ ಜುಲೈ 10 ರಂದು ರಾತ್ರಿ 10.45ರ ಸುಮಾರಿಗೆ ಮುಂಬೈನ ಥಾಣೆ ರೈಲ್ವೇ ಸ್ಟೇಷನ್ ನಿಂದ ಉಡುಪಿಗೆ ರೈಲಿನಲ್ಲಿ ಹೊರಟಿದ್ದರು.
ಈ ವೇಳೆ ಪತ್ನಿ ಮತ್ತು ಮಗಳ ಚಿನ್ನದ ಆಭರಣಗಳನ್ನು 2 ಬ್ಯಾಗ್ ನಲ್ಲಿ ಬಟ್ಟೆಯ ಮಧ್ಯೆ ಇಟ್ಟು ಆ ಬ್ಯಾಗ್ ಗಳನ್ನು ರೈಲ್ವೇ ಸೀಟ್ ನ ಅಡಿಭಾಗದಲ್ಲಿ ಇಟ್ಟುಕೊಂಡು ಪ್ರಯಾಣಿಸುತಿದ್ದರು.ರೈಲಿನಲ್ಲಿ ಇವರ ಪಕ್ಕದ ಸೀಟಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿದ್ದರು. ರೈಲು ಕರ್ನಾಟಕದ ಕುಮಟಾ ಬಳಿ ಬರುತ್ತಿದ್ದಾಗ ಜೋರಾಗಿ ಮಳೆ ಸುರಿಯಲು ಪ್ರಾರಂಬಿಸಿದ್ದು, ಆಗ ಪಕ್ಕದ ಸೀಟ್ ನಲ್ಲಿದ್ದ ಓರ್ವ ವ್ಯಕ್ತಿಯು ನಿಮ್ಮ ಬ್ಯಾಗ್ ಗೆ ಮಳೆ ನೀರು ಬೀಳುತ್ತದೆ ಅದನ್ನು ಮೇಲ್ಗಡೆ ಇಡಿ ಎಂದು ಕೇಳಿದಾಗ ತುಕಾರಾಂ ಅವರು ಆಯಿತು ಇಟ್ಟುಬಿಡಿ ಎಂದುಹೇಳಿದ್ದಾರೆ.
ಆ ಬಳಿಕ ಪಕ್ಕದ ಸೀಟ್ ನಲ್ಲಿ ಇನ್ನೊಬ್ಬ ವ್ಯಕ್ತಿ ಇಳಿದು ಹೋಗಿದ್ದು, ನಂತರ ಬ್ಯಾಗ್ ಮೇಲಿಟ್ಟಿದ್ದ ವ್ಯಕ್ತಿಯೂ ಭಟ್ಕಳ ಸ್ಟೇಷನ್ ನಲ್ಲಿ ಇಳಿದುಕೊಂಡಿದ್ದನು. ಆತ ಇಳಿದು ಹೋದ ಬಳಿಕ ಸಂಶಯಗೊಂಡ ತುಕಾರಾಂ ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಬ್ಯಾಗ್ ನಲ್ಲಿದ್ದ ಒಟ್ಟು ₹6,76,000 ಮೌಲ್ಯದ 169 ಗ್ರಾಂ ಚಿನ್ನದ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.