ರಾಜ್ಯ

ಮಡಿಕೇರಿ: ಕಾಮಗಾರಿ ಸ್ಥಳದಲ್ಲಿ ಮಗುಚಿದ ಕಾಂಕ್ರೀಟ್ ಲಾರಿ

ಮಡಿಕೇರಿ: ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚೇರಂಬಾಣೆ ಕೊಳಗದಾಳು ಬಳಿಯ ಪಾಕ ಎಂಬಲ್ಲಿ ನಡೆದಿದೆ. ಗದಗ ಮೂಲದ ಸಂತೋಷ್ ಬಂಡಾರಿ(೨೭) ಮತ್ತು ಪ್ರವೀಣ್(೨೧) ಮೃತ ದುರ್ದೈವಿ ಕಾರ್ಮಿಕರು.

ಕಳೆದ ೨ ದಿನಗಳಿಂದ ಮಳೆ ಅಲ್ಪ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಶನಿವಾರ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ ೧೦ ಚಕ್ರದ ಲಾರಿ ಕೊಳಗದಾಳು ಮಾರ್ಗವಾಗಿ ಪಾಕ ರಸ್ತೆಯ ತಡೆಗೋಡೆ ನಿರ್ಮಿಸುವ ಸ್ಥಳಕ್ಕೆ ತಲುಪಿದೆ. ಬಳಿಕ ಲಾರಿಯನ್ನು ಮೇಲ್ಬಾಗದಲ್ಲಿ ನಿಲ್ಲಿಸಿಕೊಂಡು ಕೆಳ ಭಾಗದಲ್ಲಿರುವ ತಡೆಗೋಡೆಗೆ ಕಾಂಕ್ರೀಟ್ ತುಂಬಿಸಲಾಗುತ್ತಿತ್ತು. ಈ ಸಂದರ್ಭ ತಡೆಗೋಡೆಯ ಪಕ್ಕದಲ್ಲಿ ಕುಸಿತ ಉಂಟಾಗಿ ಲಾರಿ ಏಕಾಏಕಿ ಕೆಳಗೆ ಮಗುಚಿ ಬಿದ್ದಿದೆ. ಪರಿಣಾಮ ಕೆಳಭಾಗದಲ್ಲಿದ್ದ ಕಾರ್ಮಿಕರಾದ ಗದಗ ಜಿಲ್ಲೆ ಇಂದಿರಾ ನಗರದ ನಿವಾಸಿಗಳಾದ ನಂತೋಷ್ ಬಂಡಾರಿ ಹಾಗೂ ಪ್ರವೀಣ್ ಮಣ್ಣಿನಡಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ .

ಲಾರಿ ಸಹಿತ ಮಣ್ಣಿನ ರಾಶಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿಟಾಚಿ ಯಂತ್ರಗಳನ್ನು ತಂದು ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತ ದೇಹಗಳನ್ನು ಹೊರ ತೆಗೆಯಲಾಯಿತು.

ಘಟನಾ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭಾಗಮಂಡಲ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಉಳಿದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker