
ಆಗ್ರಾ: ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಕಚೇರಿಗೆ ಬಂದೂಕು ಹಿಡಿದು ನುಗ್ಗಿದ ೬ ಮಂದಿ ದರೋಡೆಕೋರರು ಚಿನ್ನ ಹಾಗೂ ಲಕ್ಷಾಂತರ ರೂ. ಹಣ ದೋಚಿದ ಘಟನೆ ಉತ್ತರ ಪ್ರದೇಶದ ಕಮಲಾ ನಗರದಲ್ಲಿ ನಡೆದಿದೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಮಂದಿ ಪೈಕಿ ಇಬ್ಬರು ದರೋಡೆಕೋರರಾದ ಮನೀಷ್ ಪಾಂಡೆ ಮತ್ತು ನಿದೋರ್ಷ್ ಕುಮಾರ್ ಅನ್ನು ಎನ್ಕೌಂಟರ್ ಮಾಡಿದ್ದಾರೆ.
ಮಣಪ್ಪುರಂ ಕಚೇರಿಗೆ ಬಂದೂಕು ಹಿಡಿದು ಮುಸುಕುಧಾರಿಗಳಾಗಿ ನುಗ್ಗಿದ ದರೋಡೆಕೋರರ ತಂಡ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಸುಮಾರು 15 ಕೆಜಿ ಚಿನ್ನ, 5 ಲಕ್ಷ ರೂಪಾಯಿ ನಗದು ಲೂಟಿ ಮಾಡಿ ಪರಾರಿಯಾಗಿದ್ದರು .ಆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಚೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದರು. ದರೋಡೆಕೋರರು ಸಮೀಪದ ಮೆಡಿಕಲ್ ಶಾಪ್ವೊಂದರಲ್ಲಿ ಇರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದರು. ಆ ವೇಳೆ ದರೋಡೆಕೋರರ ತಂಡ ಪೊಲೀಸರತ್ತ ಗುಂಡಿನ ದಾಳಿ ಮಾಡಿದ್ದು, ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಆರೋಪಿಗಳಿಬ್ಬರು ಎನ್ಕೌಂಟರ್ಗೆ ಬಲಿಯಾಗಿದ್ದು ಈ ವೇಳೆ ಅವರಿಂದ 7.5 ಕೆಜಿ ಚಿನ್ನ, ಒಂದೂವರೆ ಲಕ್ಷ ನಗದು ವಶಕ್ಕೆ ಪಡೆಯಲಾಯಿತು .