ಕರಾವಳಿ

ಉಡುಪಿ: ಕೊಡಗು ಜಿಲ್ಲೆಯ ಅಪ್ರಾಪ್ತ ಬಾಲಕನ ರಕ್ಷಣೆ

ಉಡುಪಿ: ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ಕೊಡಗು ಜಿಲ್ಲೆಯ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಮಕ್ಕಳ ರಕ್ಷಣಾ ಘಟಕ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ರಕ್ಷಿಸಿರುವ ಘಟನೆಯು ಉಡುಪಿಯಲ್ಲಿ ನಡೆದಿದೆ. ಕಾರ್ಯಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್ ಅವರು ಪಾಲ್ಗೊಂಡಿದ್ದರು.

ಬಾಲಕನು ಅತ್ತೂರು ಹಾರಂಗಿ ಇಲ್ಲಿಯ ಜ್ಞಾನಗಂಗಾ ರೆಸಿಡೆನ್ಸಿಯಲ್ ವಿದ್ಯಾ ಸಂಸ್ಥೆಯ 10 ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮನನೊಂದಿರುವ ಬಾಲಕನು ಬಟ್ಟೆ, ಬರೆ, ಪಠ್ಯಪುಸ್ತಕ, ಶಾಲೆಯ ದಾಖಲೆ ಪತ್ರಗಳೊಂದಿಗೆ ಮನೆ ಬಿಟ್ಟು ಬಂದಿದ್ದು, ಉಡುಪಿ ನಗರದಲ್ಲಿ ಉದ್ಯೋಗ ಅರಸುತ್ತಿರುವಾಗ, ನಾಗರಿಕ ಸಮಿತಿಯ ಕಾರ್ಯಕರ್ತರಿಗೆ, ಬಾಲಕ ಅಸಹಾಯಕ ಸ್ಥಿತಿಯಲ್ಲಿರುವ ವಿಷಯವು ತಿಳಿದುಬಂದಿದೆ.

ಮಕ್ಕಳ ರಕ್ಷಣಾ ಘಟಕದ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಅವರು ಮನೊಂದಿರುವ ಬಾಲಕನಿಗೆ ಸಾಂತ್ವನ ಹೇಳಿ ಆಪ್ತಸಮಾಲೋಚನೆ ನಡೆಸಿದ್ದಾರೆ. ನಂತರ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮಾರ್ಗದರ್ಶನದಂತೆ, ಬಾಲಕನಿಗೆ ಶಂಕರಪುರದ ವಿಶ್ವಾಸದ ಮನೆ ಪುರ್ನವಸತಿ ಕೇಂದ್ರದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.

ಘಟನೆಯ ಕುರಿತು ಪರಿವೀಕ್ಷಣಾಧಿಕಾರಿ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಬಾಲಕನ ಸಂಬಂಧಿಕರು ತುರ್ತಾಗಿ ಉಡುಪಿ ಮಕ್ಕಳ ರಕ್ಷಣಾ ಘಟಕ ಅಥವ ಉಡುಪಿ ನಗರ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!