ಉಡುಪಿ : ಜಿಲ್ಲಾಧಿಕಾರಿ ಜಿ ಜಗದೀಶ್, ಕೋವಿಡ್ ಪಾಸಿಟಿವಿಟಿ ರೇಟ್ ಏರಿಕೆಗೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಕಾರಣ..!

ಉಡುಪಿ : ಜವಾಬ್ದಾರಿ ಸ್ಥಾನದಲ್ಲಿರುವವರು ಸರಿಯಾಗಿ ಮಾರ್ಗಸೂಚಿಗಳನ್ನು ಪಾಲಿಸಿದರೆ ಸಾರ್ವಜನಿಕರು ಪಾಲಿಸುತ್ತಾರೆ. ಇಲ್ಲವಾದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳಲು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಕಾರಣ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದಾರೆ .
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವವರು ಮೊದಲು ಕೊರೋನಾ ಮಾರ್ಗ ಸೂಚಿ ಅನುಸರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಜನಕ್ಕೆ ಮಾದರಿಯಾಗ ಬೇಕು. ಸಾರ್ವಜನಿಕರು ಮಾರ್ಗಸೂಚಿ ಪಾಲಿಸಬೇಕಾದರೆ ಮೊದಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಸಂಘ-ಸಂಸ್ಥೆಗಳು ನಿಯಮವನ್ನು ಪಾಲಿಸಬೇಕು. ಸಭೆ, ಸಮಾರಂಭ ಮಾಡುವುದನ್ನು ನಿಲ್ಲಿಸಬೇಕು. ಕೋವಿಡ್ ಸೋಂಕು ಹೆಚ್ಚಿದ ನಂತರ ಎಚ್ಚೆತ್ತುಕೊಂಡರೆ ಉಪಯೋಗ ಇಲ್ಲ ಎಂದರು.
ಜಿಲ್ಲೆಯ ಪಾಸಿಟಿವಿಟಿ ರೇಟ್ 3 ಶೇಕಡಾ ಆಸುಪಾಸಿನಲ್ಲಿದೆ. ಎರಡು ಮೂರು ದಿನದಿಂದ ಶೇಕಡಾ ೫ ಪಾಸಿಟಿವಿಟಿ ರೇಟ್ ಬರುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದ ಜೊತೆ ಉಡುಪಿ ಜಿಲ್ಲೆ ಸಂಪರ್ಕದಲ್ಲಿರುವ ಕಾರಣ ಪಾಸಿಟಿವ್ ಸಂಖ್ಯೆ ಹೆಚ್ಚಾಗಲು ಕಾರಣ. ಪ್ರಾಥಮಿಕ ಸಂಪರ್ಕದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಜಿಲ್ಲೆಯಲ್ಲಿ ಕಾಣಬಹುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ೨ ನೇ ಅಲೆ ಇನ್ನು ಮುಕ್ತಾಯವಾಗಿಲ್ಲ ಆದರೆ ಜನರು ಕೊರೋನಾ ಮುಗಿದಿದೆ ಎಂಬಂತೆ ವರ್ತಿಸುತ್ತಿದ್ದಾರೆ. ನೂರಾರು ಜನ ಸೇರುವ ಕಾರ್ಯಕ್ರಮಗಳು ನಡೆಯುತ್ತಿದೆ. ಇದು ಸರಿಯಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದರೂ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದೆ ಎಂದ ಅವರು, ಕಾರ್ಯಕ್ರಮ ಮಾಡುವವರೇ ಮೂರನೇ ಅಲೆಯ ಆಹ್ವಾನಕ್ಕೆ ಕಾರಣ ಆಗುತ್ತಾರೆ. ಕಾರ್ಯಕ್ರಮ ಮಾಡುವವರಿಂದ ಸಾಮಾನ್ಯ ಜನರ ಜೀವನಕ್ಕೆ ಕಷ್ಟವಾಗಲಿದೆ. ಸಕ್ರಿಯ ಪ್ರಕರಣದ ಸಂಖ್ಯೆ ಈಗ ಸಾವಿರಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.