ವಯಸ್ಸು ಇನ್ನೂ 23, ಆದರೂ 200 ಯುವತಿಯರಿಗೆ, 100 ಮಹಿಳೆಯರಿಗೆ ವಂಚಿಸಿದ ಹುಡುಗ ..!

ವಿಜಯವಾಡ: ಇನ್ನೂ 23 ವರ್ಷ ವಯಸ್ಸಿನ ಈ ಸ್ಪುರದ್ರುಪಿ ಯುವಕ ಒಂದಲ್ಲ ಎರಡಲ್ಲ ಬರೋಬ್ಬರಿ 200 ಯುವತಿಯರು, 100 ವಿವಾಹಿತ ಮಹಿಳೆಯರಿಗೆ ವಂಚಿಸಿದ್ದಾನೆ ಅಂದರೆ ಯಾರಾದರೂ ನಂಬುವುದು ಕಷ್ಟ. ಆದರೂ ಇದು ಸತ್ಯ.
ಚೆನ್ನುಪಲ್ಲಿ ಪ್ರಸನ್ನಕುಮಾರ್ ಅಲಿಯಾಸ್ ಪ್ರಶಾಂತಿ ರೆಡ್ಡಿ ಅಲಿಯಾಸ್ ರಾಜರೆಡ್ಡಿ ಅಲಿಯಾಸ್ ಟೋನಿ (23) ಪ್ರಕರಣದ ಆರೋಪಿಯಾಗಿದ್ದಾನೆ. ಈ ಖತರ್ನಾಕ್ ಯುವಕ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದತುರ್ ಗೀತಾಶ್ರಮ್ ಸ್ಟ್ರೀಟ್ ಮೂಲದವನಾಗಿದ್ದಾನೆ.
ಆರೋಪಿ ಪ್ರಸನ್ನಗೆ 2020ರಲ್ಲಿ ಶೇರ್ಚಾಟ್ ಮೂಲಕ ನಬಿಕೊಟಾ ಎಂಬ ವ್ಯಕ್ತಿಯಿಂದ ಶ್ರೀನಿವಾಸ್ ಎಂಬಾತನ ಪರಿಚಯವಾಗುತ್ತದೆ. ಶ್ರೀನಿವಾಸ್ಗೆ ಪ್ರಶಾಂತ್ ರೆಡ್ಡಿ ಅಲಿಯಾಸ್ ರಾಜರೆಡ್ಡಿ ಎಂಬ ಹೆಸರಿನಿಂದ ಆರೋಪಿ ಪ್ರಸನ್ನ ಪರಿಚಿತನಾಗುತ್ತಾನೆ.
ಹೈದರಬಾದ್ನ ಸೆಕ್ರೆಟರಿಯಟ್ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ತನಗೆ ಅನೇಕ ಗಣ್ಯರ ಪರಿಚಯ ಇರುವುದಾಗಿ ಹೇಳಿಕೊಳ್ಳುತ್ತಾನೆ. ಸೆಕ್ರೆಟರಿಯಟ್ನಲ್ಲಿ ಕ್ಲರ್ಕ್ ಹುದ್ದೆ ಕೊಡಿಸುವುದಾಗಿ ನಂಬಿಸುತ್ತಾನೆ. ಇದರ ನಡುವೆ ನನ್ನ ತಾಯಿ ಆರೋಗ್ಯ ಸರಿಯಿಲ್ಲ. ಚಿಕಿತ್ಸೆಗೆ ಹಣ ಬೇಕಿದೆ ಎಂದು ಶ್ರೀನಿವಾಸ್ ಬಳಿ ಕೇಳುತ್ತಾನೆ.
ಕೆಲಸದ ಬಗ್ಗೆ ಶ್ರೀನಿವಾಸ್ ತಾಯಿಯ ಬಳಿ ಹೇಳಿದಾಗ. ಹೇಗಿದ್ರೂ ಮಗನಿಗೆ ಕೆಲಸ ಸಿಗುತ್ತದೆ ಎಂದು ನಂಬಿದ್ದ ಶ್ರೀನಿವಾಸ್ ತಾಯಿ ತನ್ನ ಬಳಿಯಿದ್ದ ಚಿನ್ನದ ಸರ ಮತ್ತು ತಾಳಿಯನ್ನು ಮಾರಿ ಹಣ ಕೊಡುತ್ತಾಳೆ. ಹಣವನ್ನು ಸ್ವೀಕರಿಸುವ ಪ್ರಸನ್ನ ಅಂದಿನಿಂದ ಯಾವುದೇ ಕರೆಯನ್ನು ಸ್ವೀಕರಿಸುವುದೇ ಇಲ್ಲ.
ಇದರ ನಡುವೆ ಜುಲೈ 29ರಂದು ಕಡಪ ಜಿಲ್ಲೆಯ ಅಕ್ಕಯಪಲ್ಲೆಯಲ್ಲಿರುವ ಮನೆಯೊಳಗೆ ನುಗ್ಗಿ, ಲಾಕರ್ ಹೊಡೆದು ಅದರಲ್ಲಿದ್ದ 30 ಗ್ರಾಂ ಚಿನ್ನದ ಗ್ಲಾಸಸ್, ಕಿವಿಯೋಲೆಗಳು, ಎರಡು ಉಂಗುರಗಳನ್ನು ಪ್ರಸನ್ನ ಕಳ್ಳತನ ಮಾಡಿರುತ್ತಾನೆ. ಇದೇ ವೇಳೆ ತಾವು ಮೋಸ ಹೋಗಿರುವುದು ಶ್ರೀನಿವಾಸ್ಗೆ ತಿಳಿದು ತಡಮಾಡದೇ ದೂರು ನೀಡುತ್ತಾರೆ
ಪ್ರಸನ್ನ ಕುಮಾರ್ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪೊಲೀಸರಿಗೆ ಆತನ ಸ್ಮಾರ್ಟ್ಫೋನ್ ನೋಡಿ ಶಾಕ್ ಆಗುತ್ತದೆ. ಬಿ.ಟೆಕ್ ಅರ್ಧಕ್ಕೆ ಮೊಟಕುಗೊಳಿರುವ ಪ್ರಸನ್ನ ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಶೇರ್ಚಾಟ್ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬರುತ್ತದೆ. ವಿವಾಹಿತ ಮಹಿಳೆಯರು ಮತ್ತು ಯುವತಿಯರನ್ನು ಮರುಳು ಮಾಡಿ ಪ್ರೀತಿಯ ಬಲೆಗೆ ಬೀಳಿಸಿ ವಂಚಿಸುತ್ತಿದ್ದ.
ಅಲ್ಲದೆ ಮಹಿಳೆಯರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದನು. ಎಲ್ಲ ಚಿತ್ರಗಳನ್ನು ಸೇವ್ ಮಾಡಿಟ್ಟುಕೊಂಡಿದ್ದ ಆರೋಪಿ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾನೆ. ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಚಿನ್ನಾಭರಣವನ್ನು ಸುಲಿಗೆ ಮಾಡಿ, ಮಾರಾಟ ಮಾಡಿದ ಹಣ ಪಡೆದುಕೊಂಡಿದ್ದಾನೆ. ಅನೇಕರು ಮರ್ಯಾದೆಗೆ ಅಂಜಿ ಆತನ ವಿರುದ್ಧ ದೂರು ನೀಡಲು ಯಾರೂ ಮುಂದೆ ಬಂದಿಲ್ಲ.
ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದ ಶ್ರೀನಿವಾಸ್ಗೆ ವಂಚನೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಸನ್ನ ಪೊಲೀಸ್ ವಿಚಾರಣೆಯಲ್ಲಿ ಸುಮಾರು 100 ಮಹಿಳೆಯರು ಮತ್ತು 200 ಯುವತಿಯರಿಗೆ ಪ್ರಸನ್ನ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನಿಂದ 1.26 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.