ಕರಾವಳಿತಾಜಾ ಸುದ್ದಿಗಳು

ಜಿಲ್ಲೆಯ ಬೀಚ್ ಗಳನ್ನು ವಿಶ್ವದರ್ಜೆಗೇರಿಸಬೇಕು: ಸಚಿವ ಸುನೀಲ್ ಕುಮಾರ್

ಉಡುಪಿ: ಕಡಲತೀರದಲ್ಲಿ ಜನಸ್ನೇಹಿ ಪರಿಸರ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಜಿಲ್ಲೆಯಲ್ಲಿರುವ ಬೀಚ್‌ಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರ‍ೀಯ ಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಕೆಲಸವಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್‌ಕುಮಾರ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ, ಪರಿಸರ ಮಂತ್ರಾಲಯ ಅರಣ್ಯ ಮತ್ತು ಹವಾಮಾನ ಬದಲಾವಣೆ ಭಾರತ ಸರಕಾರ, ಸೊಸೈಟಿ ಆಫ್ ಇಂಟರ್ನೆಟ್ ಕೋಸ್ಟಲ್ ಮ್ಯಾನೇಜ್ಮೆಂಟ್ ಹಾಗೂ ಮ್ಯಾನೇಜ್ಮೆಂಟ್ ಕಮಿಟಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಜಿಲ್ಲೆಯ ಪಡುಬಿದ್ರಿ ಕಡಲ ತೀರದಲ್ಲಿ ಭಾರತದ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ರಾಜ್ಯದಲ್ಲಿ 2 ಬ್ಲೂ ಫ್ಲಾಗ್ ಬೀಚ್‌ಗಳನ್ನು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಗುರುತಿಸಿದ್ದು, ಇನ್ನೂ 16 ಬೀಚ್‌ಗಳ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಡೆನ್ಮಾರ್ಕ್ನಲ್ಲಿ ಎಫ್‌ಇಇ ಸಂಸ್ಥೆಯು ನಿಗದಿಪಡಿಸಿದ ಸರಾಸರಿ (33)ಅಂಕ ಪಡೆದಲ್ಲಿ ರಾಜ್ಯದಲ್ಲಿ ಇನ್ನೂ ಹೆಚ್ಚು ಪ್ರವಾಸಿ ಆಕರ್ಷಿತ ಬೀಚ್‌ಗಳು ನೀಲಿಧ್ವಜ ಸಂಕೇತವನ್ನು ಪಡೆಯಲಿವೆ. ಆ ನಿಟ್ಟಿನಲ್ಲಿ ನಾವು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಸಂರಕ್ಷಣೆಯನ್ನು ಸಹ ಮಾಡಬೇಕಿದೆ ಎಂದರು.

ಕರಾವಳಿ ತೀರದ ಗ್ರಾಮಗಳನ್ನು ಇಕೋಸ್ಮಾಟ್ ಗ್ರಾಮಗಳನ್ನಾಗಿ ಮಾಡುವುದರ ಜೊತೆಗೆ ಮೀನುಗಾರರ ಜೀವನಶೈಲಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದ ಅವರು ಕರಾವಳಿ ಅಭಿವೃದ್ಧಿ ಹೊಂದಿದಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಕರಾವಳಿ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ರಾಜ್ಯ ಸರಕಾರದಿಂದ ಜಿಲ್ಲಾಡಳಿತಕ್ಕೆ ಆಧ್ಯತೆಯ ಮೇರೆಗೆ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ನೀಡಲಾಗುವುದು ಎಂದರು.

ಕರಾವಳಿ ಅಭಿವೃದ್ಧಿಗೆ ಸರಕಾರದ ಜೊತೆಗೆ ಸ್ಥಳೀಯರು ಆಧ್ಯತೆ ನೀಡಿದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ಸಿಕ್ಕಂತಾಗುತ್ತದೆ ಎಂದ ಅವರು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಉತ್ತಮ ಬೀಚ್ ಗಾರ್ಡ್ಗಳಿಗೆ ಬಹುಮಾನ ವಿತರಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಮಾತನಾಡಿ, ಕರಾವಳಿ ಪ್ರದೇಶಗಳು ಅದ್ಭುತವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಟ್ಟದಲ್ಲಿ ಉತ್ತೇಜನವನ್ನು ಕೊಡುವುದರಿಂದ ಸ್ಥಳೀಯರ ಜನಜೀವನ ಸುಧಾರಿಸಬಹುದು ಹಾಗೂ ಹೆಚ್ಚು ಪ್ರವಾಸಿಗರು ಬರುವುದರಿಂದ ಆದಾಯ ಗಳಿಸುವ ಪ್ರಮಾಣವನ್ನು ಹೆಚ್ಚಿಸಬಹುದು ಎಂದರು. ಐ.ಎಫ್.ಎಸ್ ಅಧಿಕಾರಿ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಡುಬಿದ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಶೆಟ್ಟಿ ಪದ್ರ, ಪರಿಸರ ಅಭಿಯಂತರ ಗರೀಮಾ ಶರ್ಮ, ಉಡುಪಿ ಕರಾವಳಿ ಪ್ರವಾಸೋದ್ಯಮ ಇಲಾಖೆ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ವಿವಿಧ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು, ಪಡುಬಿದ್ರಿ ಎಂಡ್ ಪಾಯಿಂಟ್ ಕಡಲ ತೀರದ ಬೀಚ್ ಮ್ಯಾನೇಜ್‌ಮೆಂಟ್ ಕಮಿಟಿಯ ಸದಸ್ಯರು ಮತ್ತು ಬೀಚ್ ನಿರ್ವಹಣ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಜೆ. ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್‌ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!