ಕರಾವಳಿ

ಮಹಾಲಕ್ಷ್ಮೀ ಕೋ ಆ. ಬ್ಯಾಂಕ್ ಲಿ: 2021-22ನೇ ಸಾಲಿನ ಅರ್ಧ ವಾರ್ಷಿಕದಲ್ಲಿ ಒಟ್ಟು ರೂ. 4.60 ಕೋಟಿ ಲಾಭ- ಯಶ್ಪಾಲ್ ಸುವರ್ಣ

ಉಡುಪಿ: ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2021-22ನೇ ಸಾಲಿನ ಅರ್ಧವಾರ್ಷಿಕದಲ್ಲಿ ಸುಮಾರು ರೂ. 517.58 ಕೋಟಿ ವ್ಯವಹಾರ ನಡೆಸಿ ರೂ.4.60 ಕೋಟಿ ಒಟ್ಟು ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಎ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ.

ಬ್ಯಾಂಕ್ 2021-22ನೇ ಸಾಲಿನ ಅರ್ಧ ವಾರ್ಷಿಕದಲ್ಲಿ 285 ಕೋಟಿಗೂ ಠೇವಣಿ ಸಂಗ್ರಹಣೆ ಹಾಗೂ 244 ಕೋಟಿ ಸಾಲ ಹಾಗೂ ಮುಂಗಡದೊಂದಿಗೆ 26,000 ಸದಸ್ಯರನ್ನೊಳಗೊಂಡು 40,000 ಗ್ರಾಹಕರು ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದಾರೆ. ಪ್ರಸ್ತುತ ಅರ್ಧವಾರ್ಷಿಕ ಅವಧಿಯಲ್ಲಿ ಠೇವಣಿ ಸಂಗ್ರಹಣೆಯಲ್ಲಿ 43.37%, ಸಾಲ ಮತ್ತು ಮುಂಗಡದಲ್ಲಿ 74.66% ಪ್ರಗತಿ ಸಾಧಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ 12 ವರ್ಷಗಳಿಂದ ನಿರಂತರವಾಗಿ ಸದಸ್ಯರಿಗೆ 18% ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುತ್ತದೆ. ಬ್ಯಾಂಕ್ ಆರ್ಥಿಕ ಸದೃಡಗೊಳ್ಳುತ್ತಿರುವ ದೃಷ್ಟಿಯಿಂದ ಅಧಿಕೃತ ಪಾಲು ಬಂಡವಾಳವನ್ನು ರೂ.50 ಕೋಟಿಗೆ ನಿಗದಿಪಡಿಸಲಾಗಿದೆ. ಒಬ್ಬ ಸದಸ್ಯ ರೂ.10 ಲಕ್ಷ ಪಾಲು ಬಂಡವಾಳವನ್ನು ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ. ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ’ಎ’ ಶ್ರೇಣಿಯನ್ನು ಪಡೆದಿದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಹೊನ್ನಾವರ, ಭಟ್ಕಳ ತಾಲೂಕುಗಳಿಗೆ ವಿಸ್ತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿರುವುದಾಗಿ ತಿಳಿಸಿದ್ದಾರೆ.

ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಆರ್.ಟಿ.ಜಿ.ಎಸ್., ನೆಫ್ಟ್ ಸೌಲಭ್ಯವನ್ನು ನೀಡುತ್ತಿದೆ.

ಸೇಫ್ ಡೆಪಾಸಿಟ್ ಲಾಕರ್, ಇ-ಸ್ಟಾಂಪಿಂಗ್, ಎಸ್‌ಎಮ್‌ಎಸ್ ಬ್ಯಾಂಕಿಂಗ್, ಎಬಿಕ್ಸ್ ಕ್ಯಾಶ್ (ವೆಸ್ಟರ್ನ್ ಯೂನಿಯನ್), ಭಾರತ್ ಬಿಲ್ ಪೇಮೆಂಟ್, ಸಾಮಾನ್ಯ ಸೇವಾ ಕೇಂದ್ರ , ಎಚ್‌ಡಿಎಫ್‌ಸಿ ಬ್ಯಾಂಕಿನ ಒಡಂಬಡಿಕೆಯೊಂದಿಗೆ ಎಟಿಎಂ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಅಳವಡಿಕೊಳ್ಳಲಾಗಿದೆ.

ಈಗಾಗಲೇ ನ್ಯೂ ಇಂಡಿಯಾ ಇನ್‌ಶ್ಯೂರೆನ್ಸ್ ಕಂಪೆನಿ ಕಾರ್ಪೋರೇಟ್ ಏಜೆಂಟ್ ಮೂಲಕ ವಿಮಾ ಸೌಲಭ್ಯವನ್ನು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಆರೋಗ್ಯ ಕಾರ್ಡಿನ ಒಡಂಬಡಿಕೆಯಂತೆ ಗ್ರಾಹಕರಿಗೆ ಆರೋಗ್ಯ ಕಾರ್ಡ್ ಒದಗಿಸುತ್ತಿದೆ.

ಮಲ್ಪೆ ಶಾಖೆಯ ಗ್ರಾಹಕರ ಹೆಚ್ಚಿನ ಸೇವೆಗಾಗಿ ವ್ಯವಹಾರ ಸಮಯವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಸ್ತರಿಸಲಾಗಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟಿಗೆ ಚಾಲನೆ ನೀಡಲಾಗಿದ್ದು ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

1978ರಲ್ಲಿ ಆರಂಭಗೊಂಡಿರುವ ಬ್ಯಾಂಕ್ 42 ವರ್ಷಗಳನ್ನು ಪೂರೈಸಿದ್ದು, 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಸದಸ್ಯರನ್ನೊಳಗೊಂಡು, 1 ಸಾವಿರ ಕೋಟಿ ಠೇವಣಿ ಹಾಗೂ 10 ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಗುರಿಯನ್ನು ಹೊಂದಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಸಂದರ್ಭದಲ್ಲಿಯೂ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಯಶ್ಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!