ಬೇಟೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕೊಡಗು: ನಾಲ್ಕು ದಿನಗಳ ಹಿಂದೆ ಬೈಲುಕೊಪ್ಪ ಪರಿಸರದ ಕಾಡಿಗೆ ವಿನೋದ್ ತನ್ನ ಸ್ನೇಹಿತರಾದ ಧರ್ಮ, ಯೋಗೇಶ್, ಈಶ್ವರ ಎಂಬವರೊಂದಿಗೆ ಬೇಟೆಗೆ ತೆರಳಿದ್ದರು. ಈ ವೇಳೆ ಕಾಡಿನಿಂದ ಹಿಂದಿರುಗಿದ ಸಮಯ ಮೂವರು ಹಿಂತಿರುಗಿದ್ದು, ವಿನೋದ್ ಕಾಣೆಯಾಗಿದ್ದರು.
ಇದೀಗ ಕೊಡಗಿನ ಬಾಳುಗೋಡು ಸಮೀಪ ಕಾವೇರಿ ನದಿಯಲ್ಲಿ ಇಂದು ಅವರ ಮೃತ ದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ವಿನೋದ್ ಕಾಣೆಯಾಗಿರುವ ಬಗ್ಗೆ ಆತನ ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಬೇಟೆಗೆ ತೆರಳಿದ್ದ ಯೋಗೇಶ್, ಈಶ್ವರ ತಲೆಮರೆಸಿಕೊಂಡರೆ, ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಬೇಟೆಗೆ ತೆರಳಿದ್ದ ವೇಳೆ ಈಶ್ವರ ಕೋವಿಯಿಂದ ಮಿಸ್ಫೈರ್ ಆಗಿ ವಿನೋದನ ಎದೆ ಸೀಳಿತ್ತು ಎಂದು ತಿಳಿದುಬಂದಿದೆ . ಮೃತದೇಹವನ್ನು ನದಿ ದಾಟಿಸಿ ತರುವ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮೃತದೇಹ ಕೊಚ್ಚಿಹೋಗಿತ್ತು. ಇದರಿಂದ ಗಾಬರಿಗೊಂಡ ಮೂವರು ಪ್ರಕರಣವನ್ನು ಗೌಪ್ಯವಾಗಿಡಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದ್ದು, ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿರುವುದಾಗಿ ತಿಳಿದು ಬಂದಿದೆ.