ರಾಜ್ಯ

ಜಡ್ಜ್ ಪಿಸ್ತೂಲ್ ಗುಂಡುಗಳು ಕಾಣೆ| ಪತ್ತೆಗೆ ಎಲ್ಲಾ ಠಾಣೆಗಳ ಪೊಲೀಸರಿಗೆ ಮನವಿ

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ನಾಪತ್ತೆಯಾದ 9 ಎಂ.ಎಂ.ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳ ಮಾದರಿ ಫೋಟೋಗಳನ್ನು ಪ್ರಕಟಿಸಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಕಳುಹಿಸಿ ಪತ್ತೆಗೆ ಉಪ್ಪಾರಪೇಟೆ ಪೊಲೀಸರು ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿ ಅರುಣ್ ಅವರ ಗನ್‌ಮ್ಯಾನ್ ವಿಜಯಪುರದ ಬಾಪೂಜಿನಗರದ ಕಲ್ಲಯ್ಯ ಮಠಪತಿ(42) ನೀಡಿದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮನವಿ ಮಾಡಿಕೊಳ್ಳಲಾಗಿದೆ.

ಕಲ್ಲಯ್ಯ 2000ನೇ ಸಾಲಿನಲ್ಲಿ ಭಾರತೀಯ ಸೇನೆಗೆ ಸೇರಿ 17 ವರ್ಷಗಳ ಸೇವೆ ಸಲ್ಲಿಸಿ 2017ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದರು. ಅಲ್ಲಿಂದ 2019ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಯಾಗಿದ್ದು, ಸಿಎಆರ್ ಪಶ್ಚಿಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರಿಂದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿಗೆ ಗನ್‌ಮ್ಯಾನ್ ಆಗಿ ನಿಯೋಜನೆಗೊಂಡಿದ್ದರು.

ಪತ್ತೆಯಾಗದ ಬ್ಯಾಗ್:

ಸ್ವಂತ ಊರಿಗೆ ತೆರಳಲು ನ್ಯಾಯಮೂರ್ತಿಗಳ ಅನುಮತಿ ಪಡೆದುಕೊಂಡಿದ್ದ ಕಲ್ಲಯ್ಯ ಡಿ.25ರಂದು ಸಂಜೆ 7ರ ವೇಳೆ ಮನೆಯಲ್ಲೇ ಮದ್ಯ ಸೇವಿಸಿ ಮೆಜೆಸ್ಟಿಕ್‌ಗೆ ಬಂದಿದ್ದು ಬಸ್‌ನಲ್ಲಿ ಆಸನ ಕಾಯ್ದಿರಿಸಲು ಟ್ರಾವೆಲ್‌ ಕಚೇರಿಯ ಮುಂಭಾಗ ಬಂದಿದ್ದಾರೆ.

ಟಿಕೆಟ್ ಮಾಡಿಸಲು ಪಿಸ್ತೂಲ್, ಜೀವಂತ ಗುಂಡುಗಳು ಹಾಗೂ ಬಟ್ಟೆ ತುಂಬಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿ ಇಟ್ಟಿದ್ದಾರೆ.ಸ್ವಲ್ಪ ಸಮಯದ ನಂತರ ಬ್ಯಾಗ್ ನೋಡಿದಾಗ ಕಳುವಾಗಿರುವುದು ಗೊತ್ತಾಗಿದೆ.

ಠಾಣೆಗೆ ದೂರು:

ಸುತ್ತ-ಮುತ್ತ ಹುಡುಕಿದರೂ ಪ್ರಯೋಜನವಾಗಿರಲಿಲ್ಲ ಬಳಿಕ ಈ ಕುರಿತು ಉಪ್ಪಾರಪೇಟೆ ಠಾಣೆಗೆ ಕಲ್ಲಯ್ಯ ಮಠಪತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೆಜೆಸ್ಟಿಕ್‌ನ ಬಹುತೇಕ ಕಡೆ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!