ಕರಾವಳಿ

ಸುರತ್ಕಲ್ ಟೋಲ್ ಹೋರಾಟಗಾರರ ಮನೆಗೆ ರಾತ್ರೋರಾತ್ರಿ ನುಗ್ಗಿದ ಖಾಕಿಪಡೆ

ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ
ಹೋರಾಟವು ನಿರ್ಣಾಯಕ ಹಂತತಲುಪುತ್ತಿದ್ದಂತೆ ಸುರತ್ಕಲ್ ಟೋಲ್ ಹೋರಾಟಗಾರರ ಮನೆಗೆ ಖಾಕಿಪಡೆ
ರಾತ್ರೋರಾತ್ರಿ ನುಗ್ಗಿ ದಾಳಿ ನಡೆಸಿದೆ. ಈ ದಾಳಿಯು ಬಿಜೆಪಿಯ ಸರ್ವಾಧಿಕಾರ ಪ್ರೇರಿತ ದಾಳಿ ಎಂದು ಹೋರಾಟಗಾರರು ಟೀಕಿಸಿದ್ದಾರೆ.

ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್  ತೆರವುಗೊಳಿಸುವ ಉಗ್ರ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಬಿಜೆಪಿಯೇತರ ಎಲ್ಲಾ ವಿಪಕ್ಷಗಳು ಇದಕ್ಕೆ
ಬೆಂಬಲ ನೀಡಿದ್ದವು.

ಈ ಟೋಲ್ ವಿಚಾರವೂ ವಿಧಾನಸೌಧದಲ್ಲೂ ಸದ್ದು ಮಾಡಿದ್ದು, ಆಡಳಿತ ಪಕ್ಷಕ್ಕೆ ತಲೆನೋವು ಉಂಟು ಮಾಡಿತ್ತು. ಆದ್ದರಿಂದ ಜಿಲ್ಲಾಡಳಿತ ಮೂಲಕ ಹೋರಾಟವನ್ನು ಕೈಬಿಡುವಂತೆ ಹೋರಾಟ ಸಮಿತಿಯೊಂದಿಗೆ ಮನವಿಯನ್ನೂ ಮಾಡಲಾಗಿತ್ತು.

ಆದರೆ ಅದಕ್ಕೆ ಮಣಿಯದ ಹೋರಾಟಗಾರರ ಮನೆ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು, ಹೋರಾಟಗಾರರು 2 ಲಕ್ಷದ ಬಾಂಡ್ ಮತ್ತು ಸರ್ಕಾರಿ
ಜಾಮೀನಿನೊಂದಿಗೆ ನಾಳೆ ಬೆಳಗ್ಗೆ ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗುವಂತೆತಾಕೀತು ಮಾಡಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಟೋಲ್ ತೆರವು ಮಾಡುವ ಭರವಸೆಯನ್ನು ಆಡಳಿತ ಪಕ್ಷ ನೀಡುತ್ತಾ ಬಂದಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ, ಆದ್ದರಿಂದ ಅ. 18 ರಂದು ಟೋಲ್ ಗೆ ಮುತ್ತಿಗೆ ಹಾಕಲು ಹೋರಾಟಸಮಿತಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಖಾಕಿ ಪಡೆಯ ಮೂಲಕ ಬಗ್ಗುಬಡಿಯಲು ಮುಂದಾದ ಸರ್ಕಾರ ಮಧ್ಯರಾತ್ರಿ ಪೊಲೀಸರಿಂದ ಮನೆಗೆ ದಾಳಿಮಾಡಿಸಿದೆ. ಮಹಿಳಾ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪೊಲೀಸರ ಬೆದರಿಕೆಗೆನಾವು ಅಂಜುವುದಿಲ್ಲ, ತುಳುನಾಡ ಜನರು ಎಚ್ಚೆತ್ತುಕೊಂಡಿದ್ದಾರೆ, ಹೋರಾಟದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!