ರಾಜ್ಯ

ಸುತ್ತಿಗೆಯಿಂದ ಹೊಡೆದು ನಿವೃತ್ತ ಯೋಧನ ಹತ್ಯೆ

ಬೆಂಗಳೂರು : ನಿವೃತ್ತ ಯೋಧರೊಬ್ಬರನ್ನು ಮೆಣಸಿನ ಪುಡಿ ಎರಚಿ , ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಲಸೂರು ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ದೊಮ್ಮಲೂರಿನ ಗೌತಮನಗರ ನಿವಾಸಿ ಸುರೇಶ್‌ (56) ಕೊಲೆಯಾದವರು.

ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುರೇಶ್‌, ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಚೇಧನ ನೀಡಿ ತಾಯಿಯೊಂದಿಗೆ ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಬಳಿ ಗೌತಮ್ ಕಾಲೋನಿಯಲ್ಲಿ ವಾಸವಾಗಿದ್ದರು.

ಮೂರು ವರ್ಷಗಳ ಹಿಂದೆ ತಾಯಿ ಮೃತಪಟ್ಟ ಬಳಿಕ ಒಬ್ಬರೆ ಮನೆಯಲ್ಲಿದ್ದರು. ಈ ಮಧ್ಯೆ ಸಂಬಂಧಿಕರ ನಡುವೆ ಆಸ್ತಿ ವಿಚಾರವಾಗಿ ಒಂದಷ್ಟು ವೈಷಮ್ಯಗಳಿದ್ದು ಗಲಾಟೆ ನಡೆಯುತ್ತಿತ್ತು‌ . ಸೋದರ ಸಂಬಂಧಿಗಳು ಆಗಾಗ್ಗೆ ಮನೆಗೆ ಬಂದು ಸುರೇಶ್‌ಗೆ ಧಮ್ಕಿ ಹಾಕಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಮಧ್ಯಾಹ್ನದ ವೇಳೆ ಮನೆಯ ಹಿಂಬಾಗಿಲ ಮೂಲಕ ಒಳ ನುಗ್ಗಿರುವ ದುಷ್ಕರ್ಮಿಗಳು, ಮೊದಲಿಗೆ ಖಾರದ ಪುಡಿಯಿಂದ ಸುರೇಶ್‌ ಮುಖಕ್ಕೆ ಎರಚಿದ್ದಾರೆ. ಬಳಿಕ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಮನೆಯೆಲ್ಲ ಖಾರದಪುಡಿ ಎರಚಿ ಎಸ್ಕೇಪ್ ಆಗಿದ್ದಾರೆ

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆರೆ ಮನೆಯವರು ಸುರೇಶ್‌ಗೆ ಮೊಬೈಲ್‌ ಕರೆ ಮಾಡಿದ್ದು ಫೋನ್‌ ಸ್ವಿಚ್ಚ್ ಆಫ್ ಆಗಿದ್ದ ಹಿನ್ನಲೆಯಲ್ಲಿ ಮನೆ ಬಳಿ ಹೋಗಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲ್ಲ. ನಂತರ ಕಿಟಕಿ ತೆರೆದು ನೋಡಿದಾಗ ಮಧ್ಯದ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಸುರೇಶ್‌ ಬಿದ್ದಿದ್ದು, ಕೂಡಲೇ ಅವರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ ಎಂದು ಪೊಲೀಸರು ಘಟನೆ ಬಗ್ಗೆ ವಿವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!