ಹೈಟೆಕ್ ಶೈಲಿಯ ಸರ್ಕಾರಿ ಗೋಶಾಲೆಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಪ್ರಾರಂಭಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ರಾಜ್ಯಕ್ಕೆ ಮಾದರಿಯಾಗುವ ಸರ್ಕಾರಿ
ಗೋಶಾಲೆಯನ್ನು ಜನ ಸಹಭಾಗಿತ್ವದಲ್ಲಿ ನಿರ್ಮಿಸಿ,
ಗೋವುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ
ಸೌಲಭ್ಯಗಳನ್ನು ಒದಗಿಸುವ ಗೋಶಾಲೆಯ ಕಾಮಗಾರಿ ಕಾರ್ಯಗಳನ್ನು ಶೀಘ್ರ ಆರಂಭಿಸಿ
ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ, ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಆಯವ್ಯಯದಲ್ಲಿ ಸರ್ಕಾರವು ಗೋಶಾಲೆಯನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಸಾಕಷ್ಟು ಅನುದಾನವನ್ನು ನೀಡಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯವಿರುವ ಭೂಮಿಯನ್ನು ಸಹ ನೀಡಿದೆ. ಆಧುನಿಕ ಶೈಲಿಯಲ್ಲಿ ವೈಜ್ಞಾನಿಕ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಾಗುವ ಹಾಗೆ ನೀಲಿನಕ್ಷೆಯನ್ನು ತಯಾರಿಸಿ, ಗೋಶಾಲೆಯನ್ನು
ನಿರ್ಮಿಸಿ, ಶೀಘ್ರದಲ್ಲಿಯೇ ಪ್ರಾರಂಭಿಸಬೇಕೆಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಸರ್ವೇ
ನಂ.79/2 ರಲ್ಲಿ13.24 ಎಕ್ರೆ ಜಮೀನನ್ನು ಹಾಗೂ
ಕುಂದಾಪುರದ ಗೋಳಿಹೊಳೆ ಗ್ರಾಮದ ಸರ್ವೆ
ನಂ.279 ರಲ್ಲಿ 9.85 ಎಕ್ರೆ ಜಮೀನನ್ನು ಸರ್ಕಾರಿ
ಗೋಶಾಲೆ ನಿರ್ಮಿಸಲು ಕಾಯ್ದಿರಿಸಲಾಗಿದೆ.
ಗೋಶಾಲೆಗೆ ತಡೆ ಬೇಲಿಮತ್ತು ಕೆರೆಗಳ ನಿರ್ಮಾಣದ
ಕಾಮಗಾರಿಗಳನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕೆಂದು ತಿಳಿಸಿದರು.
ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ
ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು
ಮೂಡಿಸುವುದರೊಂದಿಗೆ ಅದರ ಸಮರ್ಪಕ
ಅನುಷ್ಠಾನ ಆಗಬೇಕು ಎಂದ ಅವರು ಜಿಲ್ಲೆಯಲ್ಲಿ
ಈಗಾಗಲೇ 12 ಗೋಶಾಲೆಯನ್ನು ಖಾಸಗಿ ಸಂಸ್ಥೆಗಳು ನಡೆಸುತ್ತಿದ್ದು, ಇಲ್ಲಿ 2660 ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ ಎಂದರು.
ಜಾನುವಾರುಗಳನ್ನು ರಕ್ಷಣೆ ಮಾಡುವ ರೀತಿಯಲ್ಲಿಯೇ ಇತರೆ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆ ಮಾದರಿಯಲ್ಲಿಯೇ ಪ್ರಾಣಿ ರಕ್ಷಣಾ ಶೆಲ್ಟರ್ ಗಳನ್ನು ಪ್ರಾರಂಭಿಸಲು ಪ್ರಾಣಿಪ್ರಿಯರು ಹಾಗೂ ಅಧಿಕಾರಿಗಳು ಚಿಂತಿಸಬೇಕು ಎಂದರು.
ಸರ್ಕಾರದ ವತಿಯಿಂದ ಪ್ರಾಣಿಗಳ ಕಲ್ಯಾಣಕ್ಕಾಗಿ ಜಿಲ್ಲಾ ಪ್ರಾಣಿದಯಾ ಸಂಘಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವುರೊಂದಿಗೆ ಅವುಗಳ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಅಭಿಯಾನಗಳನ್ನು ಜಿಲ್ಲೆಯಾದ್ಯಂತ ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್,
ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಶಂಕರ್
ಶೆಟ್ಟಿ, ವಿವಿಧ ಶಾಲೆಗಳ ಮುಖ್ಯಸ್ಥರು, ಪ್ರಾಣಿದಯಾ
ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆಯ
ಅಧಿಕಾರಿಗಳು ಉಪಸ್ಥಿತರಿದ್ದರು.