ದೆವ್ವ ಬಿಡಿಸುತ್ತೇನೆ ಎಂದು ಬೆತ್ತದಿಂದ ಮಗುವನ್ನು ಹೊಡೆದು ಕೊಂದ ಮಂತ್ರವಾದಿ

ಚಿತ್ರದುರ್ಗ: ಸಮಾಜ ಎಷ್ಟೇ ಬದಲಾಗಿದೆ ಯೆಂದರೂ ಜನರು ಮಾತ್ರ ಇನ್ನೂ ಕೆಲ ಮೂಢ ನಂಬಿಕೆಗಳಿಗೆ ದಾಸರಾಗಿಯೇ ಉಳಿದಿದ್ದಾರೆ. ಮಗುವಿಗೆ ದೆವ್ವ, ಭೂತ ಮೆಟ್ಟಿಕೊಂಡಿದೆ, ಬಿಡಿಸುತ್ತೇನೆ ಎಂದು ಮಂತ್ರವಾದಿಯೊಬ್ಬ 2 ವರ್ಷದ ಕಂದಮ್ಮಳನ್ನೇ ಬಲಿ ಪಡೆದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ಮಗು ಪೂರ್ಣಿಕಾ ಎಂದು ಗುರುತಿಸಲಾಗಿದೆ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಅಜ್ಕಿಕ್ಯಾತನ ಹಳ್ಳಿ ನಿವಾಸಿಗಳಾದ ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ.
2 ವರ್ಷದ ಪೂರ್ಣಿಕಾ ಆಗಾಗ ಬೆಚ್ಚಿ ಬೀಳುತ್ತಿದ್ದಳಂತೆ. ಹಾಗಾಗಿ ಆಕೆಯನ್ನು ಸ್ಥಳೀಯ ಮಂತ್ರವಾದಿ ರಾಕೇಶ್ ಎಂಬಾತನ ಬಳಿ ಕರೆದು ಕೊಂಡು ಹೋಗಿದ್ದಾರೆ. ಮಂತ್ರವಾದಿ ರಾಕೇಶ್, ಮಗುಗೆ ದೆವ್ವ ಹಿಡಿದಿದೆ ಅದನ್ನು ಬಿಡಿಸಬೇಕು ಎಂದು ಹೇಳಿ ಮಗುವನ್ನು ಬೆತ್ತದಿಂದ ಬಾರಿಸಿದ್ದಾನೆ.
ಬೆತ್ತದ ಏಟಿಗೆ ಮಗು ಪೂರ್ಣಿಕಾ ಮೈ ತುಂಬಾ ಗಾಯವಾಗಿದ್ದು, ಬಾಸುಂಡೆ ಬಂದಿದೆ. ನೋವು ತಾಳಲಾರದೇ ಮಗು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲೇ ಮಗು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಸಾವನ್ನಪ್ಪುತ್ತಿದ್ದಂತೆಯೇ ಪರಾರಿಯಾಗಿದ್ದ ಮಂತ್ರವಾದಿ ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.