ನದಿಯಲ್ಲಿ ಈಜಲು ಹೋದ 8 ವರ್ಷದ ಬಾಲಕ: ಮೊಸಳೆ ಬಾಯಿಗೆ ಸಿಕ್ಕಿ ಮೃತ್ಯು

ಮಧ್ಯಪ್ರದೇಶ : ನದಿಯಲ್ಲಿ ಸ್ನಾನ ಮಾಡಲು ಹೋದ 8 ವರ್ಷದ ಬಾಲಕನನ್ನು ಮೊಸಳೆ ನುಂಗಿರುವ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಚಂಬಲ್ ನದಿಯಲ್ಲಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ನಡೆಸಿ ನದಿಗೆ ಎಳೆದೊಯ್ದಿದೆ. ಬಳಿಕ ಬಾಲಕನನ್ನು ನುಂಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಆತನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದಿದ್ದಾರೆ. ಬಳಿಕ ಮೊಸಳೆಯನ್ನು ನದಿಯಿಂದ ಹೊರಗೆ ಎಳೆದು ತಂದಿದ್ದಾರೆ.
ನಂತರ ಘಟನೆ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಗ್ರಾಮಸ್ಥರ ಕೈಯಿಂದ ರಕ್ಷಿಸಲು ಪ್ರಯತ್ನಿಸಿದರು. ಆದರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. ಮೊಸಳೆಯ ಹೊಟ್ಟೆಯಲ್ಲಿ ನಮ್ಮ ಮಗ ಇನ್ನೂ ಜೀವಂತವಾಗಿರಬಹುದು. ಮೊಸಳೆ ಬಾಲಕನ್ನು ಉಗುಳಿದ ನಂತರವಷ್ಟೇ ಬಿಡುತ್ತೇವೆ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು.
ಘಟನೆ ಕುರಿತಂತೆ ಮಾತನಾಡಿದ ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ವೀರ್ ಸಿಂಗ್ ತೋಮರ್ ಅವರು, ಬಾಲಕ ಸ್ನಾನ ಮಾಡಲು ನದಿಯ ಆಳಕ್ಕೆ ಇಳಿದಿದ್ದಾನೆ. ಈ ವೇಳೆ ಬಾಲಕನನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಂತರ ಬಲೆ ಮತ್ತು ಕೋಲುಗಳನ್ನು ಬಳಸಿ ಜನ ಮೊಸಳೆಯನ್ನು ಹಿಡಿದಿದ್ದಾರೆ. ಈ ಬಗ್ಗೆ ಜಾಗೃತಿ ವಹಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.