ಕಾಪು : ಫ್ಲ್ಯಾಟ್ ನಿಂದ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಕಾಪು : ಉಡುಪಿ ಜಿಲ್ಲೆಯ ಮೂಳೂರು ಎಸ್.ಎಸ್. ರೋಡ್ ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್ ನಿಂದ ಚಿನ್ನಾಭರಣ ಸಹಿತ ನಗ-ನಗದು ಕಳವುಗೈದ ಪ್ರಕರಣ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಂಗಳೂರು ಬಜಪೆ ಮೂಲದ ಪ್ರಸ್ತುತ ಮೂಳೂರು ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್ ನಲ್ಲಿ ವಾಸವಿರುವ ವಾಜೀದ್ ಜೆ. (25) ಮತ್ತು ಉಡುಪಿ ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಶಹನಾಜ್ (32) ಬಂಧಿತರು ಎಂದು ತಿಳಿದು ಬಂದಿದೆ.
ಮೂಳೂರು ಶ್ರೀ ಸಾಯಿ ವಾರ್ಚರ್ ಪ್ಲಾಟ್ನಲ್ಲಿ ವಾಸವಿದ್ದ ಆಜ್ಯೂ ಸರ್ಫ್ರಾಜ್ ಆ. 8ರಂದು ಫ್ಲ್ಯಾಟ್ಗೆ ಬೀಗ ಹಾಕಿ ಉಡುಪಿಯಲ್ಲಿರುವ ತಂಗಿಯ ಮನೆಗೆ ತೆರಳಿದ್ದರು. ಆ. 10ರಂದು ಬೆಳಗ್ಗೆ ಫ್ಲ್ಯಾಟ್ ಗೆ ಬಂದು ಮನೆಯ ಕಪಾಟನ್ನು ತೆರೆದು ನೋಡಿದಾಗ ಡ್ರಾಯರ್ನಲ್ಲಿಟ್ಟಿದ್ದ 1.98 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ ಕಾಪು ಪೊಲೀಸರು ಸಿಸಿ ಕೆಮರಾ ದೃಶ್ಯ ಸಹಿತ ವಿವಿಧ ದಾಖಲೆ ಪರಿಶೀಲಿಸಿ, ಸಂಶಯದ ಮೇರೆಗೆ ಅದೇ ಫ್ಲ್ಯಾಟ್ ನಲ್ಲಿ ವಾಸವಿದ್ದ ವಾಜೀದ್ನನ್ನು ಪೊಲಿಪು ಜಂಕ್ಷನ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಆರೋಪಿಯು ಫ್ಲ್ಯಾಟ್ ನಿಂದ ವಿವಿಧ ಸೊತ್ತುಗಳನ್ನು ಕಳವುಗೈದಿರುವ ವಿಚಾರವನ್ನು ಬಾಯ್ಬಿಟ್ಟಿದ್ದ. ಮಾತ್ರವಲ್ಲದೇ ಈ ಕೃತ್ಯದಲ್ಲಿ ತನ್ನ ಸ್ನೇಹಿತೆ ಶಹನಾಜ್ ಕೂಡಾ ಕೈ ಜೋಡಿಸಿರುವುದಾಗಿ ತಿಳಿಸಿದ್ದ ಎಂದು ತಿಳಿಯಲಾಗಿದೆ.
ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.