ಅಜ್ಜಿನಡ್ಕದಲ್ಲಿ ಕೊಲೆಯತ್ನ ಪ್ರಕರಣ : ಪ್ರಮುಖ ಆರೋಪಿಯ ಬಂಧನ.

ಮಂಗಳೂರು :ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ಅಜ್ಜಿನಡ್ಕ ಎಂಬಲ್ಲಿ ಮೀನಿನ ವ್ಯಾಪಾರಿ ರೌಡಿಶೀಟರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಫೈಸಲ್ ನಗರ ನಿವಾಸಿ ತಲ್ಲತ್ ಯಾನೆ ಫೈಸಲ್ ನಗರ ತಲ್ಲಾತ್. ಈ ಹಿಂದೆ ಆಚಿ ,ನೌಫಾಲ್,ಅಶ್ಫಾಕ್,ನಿಸಾಕ್,ರಿಫತ್ ಆಲಿ,ರಹೀಮ್ ಎಂಬವರನ್ನು ಬಂಧಿಸಲಾಗಿತ್ತು.
ಮೂಲತ: ಕುದ್ರೋಳಿ ನಿವಾಸಿ ಸದ್ಯ ಕೆ.ಸಿ ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಆರೀಫ್ ಎಂಬಾತನನ್ನು ಮೇ.26 ರಂದು ಕೆಲಸಕ್ಕೆಂದು ಮಂಗಳೂರು ಮೀನಿನ ಧಕ್ಕೆಗೆ ತೆರಳುವ ಸಂದರ್ಭದಲ್ಲಿ ಬಂಧಿತ ಆರೋಪಿ ತಲ್ಲಾತ್ ನೇತೃತ್ವದ ಏಳು ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಮಂಗಳೂರಿನ ಕಂಕನಾಡಿ, ಬಂದರು ಪೊಲೀಸ್ ಠಾಣೆಯಲ್ಲಿ ತಲವಾರು ದಾಳಿಗೊಳಗಾದ ಆರೀಫ್ ವಿರುದ್ಧ 11 ಪ್ರಕರಣಗಳಿದ್ದು,ಆತ ರೌಡಿಶೀಟರ್ ಆಗಿದ್ದಾನೆ.
ಆದರೆ ಪೊಲೀಸ್ ತನಿಖೆಯಲ್ಲಿ ಅಂದು ನಡೆದ ದಾಳಿ ಮೀನಿನ ವ್ಯಾಪಾರ ಸಂಬಂಧಿಸಿದ ಹಣದ ವಿಚಾರಕ್ಕಾಗಿತ್ತು ಅನ್ನುವುದು ತಿಳಿದುಬಂದಿದೆ.ಫರಂಗಿಪೇಟೆ ಡಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿ ನಟೋರಿಯಸ್ ರೌಡಿ ತಲ್ಲಾತ್ ಆಗಿದ್ದನು. ತಲ್ಲಾತ್ ಸಹಚರ ನೌಫಾಲ್ ಯಾನೆ ಟೊಪ್ಪಿ ನೌಫಾಲ್ ಕೂಡಾ ಫರಂಗಿಪೇಟೆ ಡಬಲ್ ಮರ್ಡರ್ ಆರೋಪಿ ಆಗಿದ್ದನು. ತಲವಾರು ದಾಳಿಗೊಳಗಾದ ಆರೀಫ್ ನೌಫಾಲ್ ಚಿಕ್ಕಪ್ಪನಿಗೆ ರೂ.68,000 ಮೀನಿನ ಏಲಂ ವ್ಯವಹಾರದ ಹಣ ಆಗಬೇಕಿತ್ತು. ಆದರೆ ನೌಫಾಲ್ ದೂರವಾಣಿ ಮೂಲಕ ಹಣ ಕೇಳಿದ್ದಾಗ ಇಬ್ಬರ ನಡುವೆ ಚರ್ಚೆಯುಂಟಾಗಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿ ತಲ್ಲಾತ್, ನೌಫಾಲ್ ಸಹಿತ ಏಳುಮಂದಿಯ ತಂಡ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ. ತಲ್ಲಾತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸಹಿತ ಹಲವು ಪ್ರಕರಣಗಳಿವೆ.ಈತ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಟೋರಿಯಸ್ ರೌಡಿಯಾಗಿದ್ದಾನೆ.