ಕರಾವಳಿ
ಲಂಚ ಸ್ವೀಕಾರದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಲೋಕಾಯುಕ್ತ ಪೊಲೀಸರ ಬಲೆಗೆ!!
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಮಂಗಳೂರು ತಹಶೀಲ್ದಾರ್ ಹಾಗೂ ಸಹಾಯಕನನ್ನು ಮಂಗಳೂರು ಮಿನಿ ವಿಧಾನಸೌಧಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರಿಗೆ ಜಾಗ ಮಾರಾಟಕ್ಕೆ ಸಂಬಂಧಿಸಿದಂತೆ ಎನ್ಓಸಿ ನೀಡಲು ತಹಶೀಲ್ದಾರ್ ಸಹಾಯಕ ಅಧಿಕಾರಿ ಶಿವಾನಂದ ನಾಟೇಕರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅವರಿಂದ ಶಿವಾನಂದ ನಾಟೇಕರ್ ನಿನ್ನೆ ಸಂಜೆ ಹೊತ್ತಿಗೆ 4,700ರೂ. ಲಂಚ ತೆಗೆದುಕೊಳ್ಳುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಎಸ್ಪಿ ಗಣೇಶ್ ಹಾಗೂ ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಿಚಾರಣೆ ವೇಳೆಯಲ್ಲಿ ತಹಶೀಲ್ದಾರ್ ಪುರಂದರ್ ಹೆಗ್ಡೆಗಾಗಿ ಶಿವಾನಂದ ನಾಟೇಕರ್ ಲಂಚಸ್ವೀಕರಿಸುವುದಾಗಿ ಮಾಹಿತಿಯನ್ನು ನೀಡಿದ್ದ. ಈ ಹಿನ್ನಲೆ ತಹಶೀಲ್ದಾರ್ ಪುರಂದರ್ ಹೆಗ್ಡೆಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.