ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕುಸಿದುಬಿದ್ದು ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ
ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಯಾದಗಿರಿ ಜಿಲ್ಲೆಯ ದೋರನಹಳ್ಳಿಯ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಇಹಲೋಕ ತ್ಯಾಜಿಸಿದ್ದಾರೆ. ಬೆಂಗಳೂರು: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನಿಂದ ಯಾದಗಿರಿಗೆ ಹಿಂದಿರುವಾಗ ಇಂದು(ಜನವರಿ 11) ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಅಸ್ತಂತರಾಗಿದ್ದಾರೆ.
ಮುಂದಿನ ತಿಂಗಳಲ್ಲಿ ತಮ್ಮ 25ನೇ ಪಟ್ಟಾಧಿಕಾರ ಮಹೋತ್ಸವ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಗಣ್ಯರನ್ನ ಆಹ್ವಾನ ನೀಡಲು ಬೆಂಗಳೂರಿಗೆ ಆಗಮಿಸಿದ್ದರು. ಆದ್ರೆ, ಇಂದು ವಾಪಸ್ ಯಾದಗಿರಿಗೆ ಹೋಗಬೇಕೆಂದು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ವಾಮೀಜಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಭಕ್ತರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುಲು ಪ್ರಯತ್ನಿಸಿದರು. ಆದರೆ, ಸ್ವಾಮೀಜಿ ಮಾರ್ಗಮಧ್ಯೆಯೇ ಇಹಲೋಕ ತ್ಯಜಿಸಿದರು.
ಶಹಪೂರ ತಾಲೂಕಿನ ದೋರನಹಳ್ಳಿ ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಇತಿಹಾಸ ಮತ್ತು ಪರಂಪರೆ, ಮಹಾಂತೇಶ್ವರರ ಜಾಗತ ಶಕ್ತಿ ಈ ಭಾಗದ ಜನಮನವನ್ನು ಪವಿತ್ರಗೊಳಿಸಿದ್ದು, ಮಠವು ಧಾರ್ಮಿಕ ಜತೆಗೆ ಸಮಾಜಮುಖಿ ಕಾರ್ಯಗಳಿಂದ ನಾಡಿನಲ್ಲಿ ಗುರುತಿಸಿಕೊಂಡಿದೆ.
ಶ್ರೀಮಠ ಸುಮಾರು 15ನೇ ಶತಮಾನದಲ್ಲಿದ್ದ ಜಾಗತ ದೇವರು, ಮಹಿಮಾ ಪುರುಷ ಎಂದೇ ಖ್ಯಾತರಾಗಿ ಸಗರನಾಡಿನಾಧ್ಯಂತ ಶಿವಾಂಶ ಸಂಭೂತರಾದ ಗುಹಾ ಪರಂಪರೆಯ ಬೆಟ್ಟದ ಮಹಾಂತೇಶ್ವರರ ಕಾಲದಿಂದ ಪರಂಪರಾಗತವಾಗಿ ತನ್ನ ಎಂದಿನ ಧಾರ್ಮಿಕ ಚಟುವಟಿಕೆಗಳಿಂದ ಬೆಳೆದು ಬಂದಿದೆ.