ಕಾಂಗ್ರೆಸ್ಸಿಗೆ ಎಲ್ಲದರಲ್ಲೂ ಜಾತಿ ಹುಡುಕುವ ಗೀಳು : ಉಡುಪಿ ಜಿಲ್ಲಾ ಬಿಜೆಪಿ ಟೀಕೆ
ಚುನಾವಣೆ ಸಮೀಪಿಸುತ್ತಿದ್ದಂತೆ ಯಾವುದೇ ಮೌಲ್ಯಾಧಾರಿತ ವಿಚಾರಗಳಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ಸಿಗೆ ಎಲ್ಲದರಲ್ಲೂ ಜಾತಿ ಹುಡುಕುವ ಗೀಳು ಹೆಚ್ಚಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್ ಎಲ್ಲ ವರ್ಗಗಳ ಜನತೆಯ ಹಿತವನ್ನು ಗಮನದಲ್ಲಿಟ್ಟಕೊಂಡು ನೀಡಿದ ದೂರದರ್ಶಿತ್ವ ಹೊಂದಿರುವ ಸರ್ವ ಸ್ಪರ್ಶಿ; ಸರ್ವ ವ್ಯಾಪಿ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ಬಿಲ್ಲವ-ಮೊಗವೀರ ಸಮಾಜವನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರ ವಾದವನ್ನು ಜಿಲ್ಲಾ ಬಿಜೆಪಿ ತಳ್ಳಿ ಹಾಕಿದೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ‘ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ’ವನ್ನು ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನಾಗಿ ಪರಿವರ್ತಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದು, ಸದ್ಯದಲ್ಲೇ ನಿಗದಿತ ಅನುದಾನ ಸಹಿತ ನಿಗಮವನ್ನು ಘೋಷಣೆ ಮಾಡುವ ಭರವಸೆ ಇದೆ. ಮೀನುಗಾರಿಕಾ ಕ್ಷೇತ್ರ ಅಭಿವೃದ್ದಿಗೆ ಬಜೆಟ್ ನಲ್ಲಿ ಅನೇಕ ಸೌಲಭ್ಯಗಳನ್ನು ಘೋಷಿಸಲಾಗಿದೆ. ಯಾವುದೇ ಸಮುದಾಯಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದಷ್ಟು ಜನಪರ ಯೋಜನೆಗಳು ಮತ್ತು ಸವಲತ್ತುಗಳನ್ನು ಕಾಂಗ್ರೆಸ್ ಆಡಳಿತದ ಸರಕಾರ ಎಂದೂ ನೀಡಿಲ್ಲ. ಪ್ರಸಕ್ತ ಸನ್ನಿವೇಶದ ಲಾಭ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ಸಿಗೆ ನಿರಾಸೆ ನಿಶ್ಚಿತ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.