ತಾಜಾ ಸುದ್ದಿಗಳು

ಬೆಂಗಳೂರಿನಾದ್ಯಂತ ಪ್ರತಿಧ್ವನಿಸಿದ ನಿಗೂಢ ಶಬ್ದ: ಭೀತಿಗೊಂಡು ಮನೆಯಿಂದ ಹೊರ ಬಂದ ಜನರು.

ಬೆಂಗಳೂರು: ಶುಕ್ರವಾರ ಮಧ್ಯರಾತ್ರಿ 12-22ರ ಸುಮಾರಿನಲ್ಲಿ ಬೆಂಗಳೂರಿನಾದ್ಯಂತ ಪ್ರತಿಧ್ವನಿಸಿದ ನಿಗೂಢ ಶಬ್ಧವೊಂದು ಜನರ ಭೀತಿಗೆ ಕಾರಣವಾಗಿದ್ದು, ಮನೆಯಿಂದ ಹಲವು ಜನ ಹೊರಬಂದು ನೋಡುತ್ತಿದ್ದರು. ಆದರೆ ಇದು ಉಗ್ರರ ದಾಳಿಯೇ ಅಥವಾ ಕ್ವಾರಿಯಲ್ಲಿನ ಸ್ಫೋಟವೇ ಎಂಬಂತಹ ನಾನಾ ಅನುಮಾನಗಳು ಉಂಟಾಗಿವೆ.

ಕುಮಾಸ್ವಾಮಿ ಲೇಔಟ್‌, ಆರ್ ಟಿ ನಗರ, ಮಲ್ಲೇಶ್ವರಂ, ರಾಜಾಜಿನಗರ, ರಾಜರಾಜೇಶ್ವರಿನಗರ, ಜೆಪಿನಗರ, ಜಯನಗರ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಸೇರಿದಂತೆ ನಗರದ ದಕ್ಷಿಣ ಹಾಗೂ ಪೂರ್ವ ಭಾಗದ ಹಲವೆಡೆ ಈ ಶಬ್ದ ಕೇಳಿಬಂದಿದೆ. ಈ ಶಬ್ದದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ, ಎಲ್ಲಿಂದ ಈ ಶಬ್ದ ಕೇಳಿಬಂತು ಎಂದು ನಗರದ ಪೊಲೀಸರು ಅಥವಾ ಕಂಟ್ರೋಲ್ ರೂಂ ಸಂಪರ್ಕಿಸಿದರೆ, ಅದರ ಸಣ್ಣ ಸುಳಿವು ಕೂಡಾ ಈವರೆಗೂ ಸಿಕ್ಕಿಲ್ಲ ಎನ್ನುತ್ತಾರೆ.

ಈ ಶಬ್ದ ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ವಿವಿಧ ಭಾಗದ ಗಸ್ತು ಸಿಬ್ಬಂದಿಗೆ ನಗರದ ಪೊಲೀಸರು ನಿರ್ದೇಶಿಸಿದ್ದಾರೆ. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ, ಏಪ್ರಿಲ್ 17, 2013ರಲ್ಲಿ ನಗರದ ಬಿಜೆಪಿ ಕಚೇರಿ ಹತ್ತಿರ ಇದೇ ರೀತಿಯ ಸ್ಫೋಟ ಸಂಭವಿಸಿತ್ತು.

ಸೂನಿಕ್ ಬೂಮ್ ನಂತಹ ಶಬ್ದ ಕೂಡಾ ಬೆಂಗಳೂರಿಗೆ ಪರಿಚಿತ. ಯುದ್ಧ ವಿಮಾನಗಳು ವೇಗವನ್ನು ಹೆಚ್ಚಿಸಿದಾಗಲೂ ಇಂತಹ ಶಬ್ದ ಕೇಳಿಬರುತ್ತದೆ. ಆದರೆ, ಇಂತಹ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ ಎಂದು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಚ್ ಎಎಲ್ ಕೂಡಾ ಈ ಶಬ್ಧದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿಲ್ಲ.

ಯಾವುದೇ ಭೂಕಂಪನದಂತಹ ಘಟನೆಗಳು ಕೂಡಾ ಸಂಭವಿಸಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ವಹಣಾ ಮಂಡಳಿ ಹೇಳಿದೆ. ಈ ಮಧ್ಯೆ ನಗರದ ಹೊರವಲಯದಲ್ಲಿ ಕ್ವಾರಿಯಲ್ಲಿ ಏನಾದರೂ ಇಂತಹ ಶಬ್ಧ ಬಂದಿರುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಹರಿಸಿದೆ.

ಸಾಮಾನ್ಯವಾಗಿ ಕ್ವಾರಿಗಳಲ್ಲಿ ಸಂಜೆ 5-30ರಿಂದ 6 ಗಂಟೆ ನಡುವೆ ಸ್ಫೋಟಗಳು ಆಗುತ್ತವೆ. ಆದರೆ, ಇದು ಮಧ್ಯರಾತ್ರಿ ಕೇಳಿಬಂದಿದೆ. ನಗರದೊಳಗೆ ಇಂತಹ ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಜಿ. ಪ್ರತಿಮಾ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker