ಕರಾವಳಿ

ಉಡುಪಿ: ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ; ಬಳಿಕ ಶವವಾಗಿ ಪತ್ತೆ!

ಉಡುಪಿ: 2  ದಿನಗಳ ಹಿಂದೆ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಸಂತೆಕಟ್ಟೆ ಸಮೀಪದ ಉಪ್ಪೂರು ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತ ವ್ಯಕ್ತಿ ಬ್ರಹ್ಮಾವರದ ಬೈಕಾಡಿ ಗ್ರಾಮದ ಕಾಮೇಶ್ವರ ದೇವಸ್ಥಾನ ವಠಾರದ ನಿವಾಸಿ ಶ್ರೀಧರ ಮಯ್ಯ (60).

ಇಂದು ಬೆಳಿಗ್ಗೆ ಮೃತದೇಹವೊಂದು ಉಪ್ಪೂರು ನದಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಮೃತದೇಹವನ್ನು ಮೇಲೆತ್ತಿದ್ದಾರೆ.‌ ಮೃತದೇಹವನ್ನು ಶ್ರೀಧರ ಮಯ್ಯ ಅವರದೆಂದು ಅವರ ಪತ್ನಿ ಹಾಗೂ ಪುತ್ರಿ ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 8ರಂದು ಸಂಜೆ ಶ್ರೀಧರ ಮಯ್ಯ ಕೋರ್ಟ್ ಕೇಸಿನ ವಿಚಾರವಾಗಿ ಚಿಕ್ಕಮಗಳೂರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದರು. ಆ ಬಳಿಕ ಶ್ರೀಧರ ಮಯ್ಯ ಬರೆದಿದ್ದ ರಿಜಿಸ್ಟರ್ಡ್‌ ಪತ್ರವೊಂದು ದೇವಸ್ಥಾನಕ್ಕೆ ಬಂದಿತ್ತು. ಆ ಪತ್ರವು ದೇವಸ್ಥಾನದ ಅಧ್ಯಕ್ಷರಿಗೆ ಬರೆದಿದ್ದು, ಅದರಲ್ಲಿ

ನನಗೆ ತುಂಬಾ ಆರೋಗ್ಯ ಸಮಸ್ಯೆ ಕಾಡುತ್ತಿದೆ. ವಿಪರೀತ ಕಾಲುನೋವು ಹಾಗೂ ವಿಪರೀತ ಬಿಕ್ಕಳಿಕೆಯಿಂದ ಬದುಕಿನಲ್ಲಿ ಜಿಗುಪ್ಸೆಗೊಂಡಿದ್ದು, ಜೀವನವೇ ಬೇಡವೆನಿಸಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಪತ್ರ ಸಿಕ್ಕಿದ ಕೂಡಲೇ ಮನೆಯವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker