
ನವದೆಹಲಿ: ದೇಶದಾದ್ಯಂತ ಜನರ ಭಾರೀ ಆಕ್ರೋಶಕ್ಕೆ ಕಾರಣವಾದ ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಮತ್ತು ಕ್ರೂರ ಹಲ್ಲೆಗೆ ಬಲಿಯಾದ ಸಂತ್ರಸ್ತ ಯುವತಿಯ ಮೃತದೇಹವನ್ನು ಆಕೆಯ ಕುಟುಂಬದವರಿಗೂ ನೀಡದೆ ರಾತ್ರೋರಾತ್ರಿ ಪೊಲೀಸರೇ ಸುಟ್ಟುಹಾಕಿದ್ದ ಪೊಲೀಸರ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ.

ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಆತುರವಾಗಿ ಮನಿಷಾಳ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಯೋಗಿ ಸರ್ಕಾರ ಉತ್ತರಿಸಿರುವುದು ಜನರ ಆಕೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಲಾಗಿದ್ದು, ಇದಕ್ಕೆ ಉತ್ತರಿಸಿ ಉತ್ತರ ಪ್ರದೇಶ ಸರ್ಕಾರ ಅಫಿಡವಿಟ್ ಸಿಲ್ಲಿಸಿದೆ. ಅಫಿಡವಿಟ್ನಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಂದ ಹಿನ್ನೆಲೆಯಲ್ಲಿ, ಹಿಂಸಾಚಾರಗಳು ನಡೆಯಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹಾಗಾಗಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು. ಸೆ. 29ರಂದು ಸಂತ್ರಸ್ತ ಯುವತಿ ಮೃತಪಟ್ಟ ಬೆನ್ನಲ್ಲೇ ಆಸ್ಪತ್ರೆ ಆವರಣದಲ್ಲೇ ಬೃಹತ್ ಪ್ರತಿಭಟನೆ ನಡೆಯಿತು.
ಹಾಗಾಗಿ, ಈ ಪ್ರಕರಣಕ್ಕೆ ಜಾತಿ ಮತ್ತು ಕೋಮು ಬಣ್ಣ ಬಳಿದು ಹಿಂಸಾಚಾರ ಸೃಷ್ಟಿಸುವ ಸಂಚು ನಡೆದಿದೆ ಎಂದು ಹತ್ರಾಸ್ ಜಿಲ್ಲಾಡಳಿತಕ್ಕೆ ಅನೇಕ ಗುಪ್ತಚರ ಮಾಹಿತಿಗಳು ಬಂದಿದ್ದವು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ನಡುರಾತ್ರಿಯೇ ಸಂತ್ರಸ್ತೆಯ ಅಂತ್ಯಕ್ರಿಯೆ ಮಾಡಬೇಕಾಯಿತು ಎಂದು ಸಿಎಂ ಯೋಗಿ ಆಧಿತ್ಯಾನಾಥ್ ನೇತೃತ್ವದ ಸರ್ಕಾರ ಹೇಳಿದೆ. ಆದರೆ ಬಳಿಕ ಪೊಲೀಸರನ್ನು ಮತ್ತೆ ಯಾವ ಕಾರಣಕ್ಕಾಗಿ ಸಸ್ಪೆಂಡ್ ಮಾಡಲಾಯಿತು ಎಂಬ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಅವರು ಉತ್ತರಿಸಬೆಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.













