
ಮಂಗಳೂರು/ಉಡುಪಿ: ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯ ೧೨ ಕೇಂದ್ರಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಉಡುಪಿ ಜಿಲ್ಲೆಯ ಒಟ್ಟು ೬೧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ೫ ನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.
ಪ್ರಸ್ತಾವಿತ ಕೇಂದ್ರಗಳಲ್ಲಿ ಕನಿಷ್ಠ ೨ ಎಕ್ರೆ ಜಾಗವಿರಬೇಕೆಂಬ ನಿಯಮವಿದೆ. ಸಿದ್ದಾಪುರದ ಕೇಂದ್ರದಲ್ಲಿ ೪.೩ ಎಕ್ರೆ ಸ್ಥಳವಿದ್ದು, ಉಳಿದೆಡೆ ೨ ಎಕ್ರೆಗಿಂತ ಹೆಚ್ಚಿಗೆ ಜಾಗವಿದೆ. ಮೇಲ್ದರ್ಜೆಗೇರಿಸಿದ ಬಳಿಕ ಇಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ಬಿಎಎಂಎಸ್ ವೈದ್ಯರು ಇರುತ್ತಾರೆ. ದಿನದ 24 ತಾಸು ಸೇವೆ ಲಭ್ಯವಾಗಲಿದ್ದು, ಇದನ್ನು ಮಾದರಿ ಆರೋಗ್ಯ ಕೇಂದ್ರವಾಗಿ ರೂಪಿಸುವುದು ಸರಕಾರದ ಉದ್ದೇಶ. ಒಟ್ಟು 3 ಕೋ.ರೂ. ವೆಚ್ಚದಲ್ಲಿ ಆಸ್ಪತ್ರೆ, ೨ ಕೋ.ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣವಾಗಲಿದೆ.
ಸಿಬಂದಿಗೆ ಅಲ್ಲೇ ವಸತಿ ಒದಗಿ ಸುವ ಮೂಲಕ 24ಗx7 ಸೇವೆ ಲಭ್ಯವಾಗಬೇಕೆಂಬುದು ಉದ್ದೇಶ. ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಮತ್ತು ಯೋಗ ಪ್ರಸಾರದ ಮೂಲಕ ಸಮಗ್ರ ಕ್ಷೇಮ ಕೇಂದ್ರವಾಗಿ ರೂಪಿಸಲಾಗುತ್ತದೆ. ಹೆರಿಗೆ ಸೌಲಭ್ಯವೂ ಲಭ್ಯವಾಗಲಿದೆ.
೫ ವರ್ಷಗಳಲ್ಲಿ ರಾಜ್ಯದ ೨೫೦ ಪ್ರಾ. ಆ. ಕೇಂದ್ರಗಳನ್ನು ಅಭಿವೃದ್ಧಿ ಪಡಿಸ ಲಾಗುವುದು ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ತಿಳಿಸಿದ್ದರು.