
ನೆಲಮಂಗಲ: ತಾಲೂಕಿನಾದ್ಯಂತ ತಡರಾತ್ರಿವರೆಗೂ ಧಾರಾಕಾರ ಸುರಿದ ಮಳೆಗೆ ಕಾಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಅಣ್ಣ-ತಂಗಿ ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಘಟನೆ ನಡೆದಿದೆ.
ಮೃತರನ್ನು ತುಮಕೂರು ಮೂಲದ ಕಾವ್ಯ(19) ಹಾಗೂ ವೇಣುಗೋಪಾಲ್ (22) ಮತ್ತು ಗಂಭೀರ ಗಾಯಗೊಂಡವರನ್ನು ಸಂಪ್ರಥ್ (22) ಎಂದು ಗುರುತಿಸಲಾಗಿದೆ. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ ಪಕ್ಕದಲ್ಲಿ ಇದ್ದ ಮನೆಯ ಮೇಲೆ ಕುಸಿದಿದೆ. ಅಲ್ಲದೆ ಮನೆಯಲ್ಲಿ ಮಲಗಿದ್ದ ಕಾವ್ಯ ಹಾಗೂ ವೇಣುಗೋಪಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತ ದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಮೀನು ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.