ಕರಾವಳಿ

ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ ನಿಂದ ಡೀಸೆಲ್ ಕಳವು.

ಬಂಟ್ವಾಳ: ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್​ನಿಂದ ಡೀಸೆಲ್ ಕಳವು ಮಾಡುತ್ತಿರುವ ಜಾಲವೊಂದು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿಯ ಅರ್ಬಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಈ ಸ್ಥಳದಲ್ಲಿ ಸುಮಾರು 1 ಸಾವಿರ ಲೀಟರ್ ಡೀಸೆಲ್ ಕಳವಾಗಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಯೊಂದರ ಡೀಸೆಲ್ ಸಾಗಾಣಿಯ ಪೈಪ್ ಸೊರ್ನಾಡಿನ ಖಾಸಗಿ ಜಮೀನಿನ ಮೂಲಕ ಹಾದು ಹೋಗಿದ್ದು, ಅದಕ್ಕೆ ಸ್ಥಳೀಯ ವ್ಯಕ್ತಿಯೋರ್ವ ಪೈಪ್ ಜೋಡಿಸಿ ಡೀಸೆಲ್ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಡೀಸೆಲ್ ಸಾಗಾಟ ಕಂಪೆನಿಯ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ ಕಂಪೆನಿಯ ಡೀಸೆಲ್ ಪ್ರಮಾಣದಲ್ಲಿ ಸುಮಾರು 500 ಲೀಟರ್​ ವ್ಯತ್ಯಾಸ ಕಂಡುಬಂದಿದ್ದು, ಬಳಿಕ ಮತ್ತೆ 500 ಲೀ. ಕಡಿಮೆಯಾಗಿದೆ. ಹೀಗಾಗಿ ಕಂಪೆನಿಯ ತಾಂತ್ರಿಕ ತಂಡ ಮೆಟಾಲಿಕ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಸೊರ್ನಾಡು ಬಳಿ ಡೀಸೆಲ್ ಕಳವಾಗುತ್ತಿರುವುದು ಪತ್ತೆಯಾಗಿದೆ.ಬಳಿಕ ಸ್ಥಳೀಯ ನಿವಾಸಿಯೋರ್ವನ ಜಮೀನಿನಲ್ಲಿ ಜೆಸಿಬಿ ಮೂಲಕ ಅಗೆದಾಗ ಡೀಸೆಲ್ ಕಳವು ಮಾಡುತ್ತಿರುವುದು ತಿಳಿದುಬಂದಿದೆ. ಆರೋಪಿಯು ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಪೈಪನ್ನು ಕೊರೆದು, ಅದಕ್ಕೆ ಇನ್ನೊಂದು ಪೈಪ್ ಜೋಡಿಸಿ, ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಗೇಟ್ ವಾಲ್ ಬಳಸಿ ಡೀಸೆಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker